ತಾಲ್ಲೂಕಿನಾದ್ಯಂತ ಈಗ ಮಳೆಯಾಗುತ್ತಿರುವುದರಿಂದ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಸುತ್ತಲಿನ ಸೌಂದರ್ಯ ದುಪ್ಪಟ್ಟಾಗಿದೆ. ಸುತ್ತಲೂ ಮಂಜು ಕವಿದ ವಾತಾವರಣ ಎಲ್ಲರನ್ನೂ ಆಕರ್ಷಿಸುತ್ತಿದೆ. ಕೆಲವು ವಾರಗಳಿಂದೀಚೆಗೆ ಬೆಟ್ಟಕ್ಕೆ ಭೇಟಿ ನೀಡಿದವರು, ಇಲ್ಲಿನ ಹಸಿರಿನ ಸೊಬಗನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವುದರಿಂದ, ಬೆಟ್ಟದ ಮನಮೋಹಕ ವಾತಾವರಣವನ್ನು ಸವಿಯಲು ಬರುವವವರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ರಜಾ ದಿನವಾದ ಶನಿವಾರ ಮತ್ತು ಭಾನುವಾರ ದೇವಾಲಯಕ್ಕೆ ಭಕ್ತರ ಜೊತೆಗೆ ಪ್ರವಾಸಿಗರು ಕೂಡ ಬರುತ್ತಿದ್ದಾರೆ.