ಚಾಮರಾಜನಗರ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವುದಕ್ಕಾಗಿ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ವಿಧಿಸಿರುವುದರಿಂದ ಜಿಲ್ಲೆಯಾದ್ಯಂತ ಮುಸ್ಲಿಮರು ಶುಕ್ರವಾರದ ಪ್ರಾರ್ಥನೆಯನ್ನು ತಮ್ಮ ತಮ್ಮ ಮನೆಗಳಲ್ಲೇ ಮಾಡಿದರು.
ಜಿಲ್ಲಾಡಳಿತದ ಸೂಚನೆಯಂತೆ ಧರ್ಮಗುರುಗಳು ಕೂಡ, ಮನೆಗಳಲ್ಲೇ ಪ್ರಾರ್ಥನೆ ನಡೆಸುವಂತೆ ಸಮುದಾಯದ ಜನರಿಗೆ ಕರೆ ನೀಡಿದ್ದರು.
ಮಸೀದಿಗಳ ಧ್ವನಿ ವರ್ಧಕಗಳ ಮೂಲಕ, ‘ಶುಕ್ರವಾರದ ಸಾಮೂಹಿಕ ಪ್ರಾರ್ಥನೆ ನಡೆಯುವುದಿಲ್ಲ. ಯಾರೂ ಮಸೀದಿಗೆ ಬರಬೇಡಿ, ನಿಮ್ಮ ಮನೆಗಳಲ್ಲೇ ಪ್ರಾರ್ಥನೆ ಮಾಡಿ’ ಎಂದು ಧರ್ಮಗುರುಗಳು ಕರೆಯನ್ನೂ ಕೊಟ್ಟರು.
‘ಲಾಕ್ಡೌನ್ ಮುಗಿಯುವವರೆಗೆ ಶುಕ್ರವಾರ ನಮಾಜ್ ಸೇರಿದಂತೆ ಎಲ್ಲ ನಮಾಜ್ಗಳನ್ನೂ ಮನೆಗಳಲ್ಲೇ ಮಾಡಲು ಸೂಚಿಸಲಾಗಿದೆ’ ಎಂದು ಮುಬಾರಕ್ ಮೊಹಲ್ಲಾದ ಅಲ್ ಮಸೀದಿಯ ಧರ್ಮಗುರು ಮುಫ್ತಿ ಜಾಫರ್ ಹುಸೇನ್ ಖಾಸ್ಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.