ಚಾಮರಾಜನಗರ: ಮೊಸರು, ಮಜ್ಜಿಗೆ ಸೇರಿದಂತೆ ದಿನಬಳಕೆಯ ಸಾಮಗ್ರಿಗಳು ಹಾಗೂ ಸ್ಟೇಷನರಿ ವಸ್ತುಗಳ ಮೇಲೆ ವಿಧಿಸಿರುವ ಜಿಎಸ್ಟಿಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ವಿಮೆನ್ ಇಂಡಿಯಾ ಮೂವ್ಮೆಂಟ್ನ (ಡಬ್ಲ್ಯುಐಎಂ) ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಗುಂಡ್ಲುಪೇಟೆ ವೃತ್ತದಲ್ಲಿ ಅಡುಗೆ ಅನಿಲ ಸಿಲಿಂಡರ್ ಹಾಗೂ ಕಟ್ಟಿಗೆ ಒಲೆ ಇಟ್ಟು ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಮೆನ್ ಇಂಡಿಯಾ ಮೂವ್ಮೆಂಟ್ನ ಜಿಲ್ಲಾ ಘಟಕದ ಅಧ್ಯಕ್ಷೆ ತೌಸಿಯಾ ಬಾನು, ’ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜನಸಾಮಾನ್ಯರ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿದೆ.ಎಲ್.ಪಿ.ಜಿ ಸಿಲಿಂಡರ್ ಬೆಲೆಯನ್ನು ₹50ರಷ್ಟು ಹೆಚ್ಚಿಸಿ ಇದೀಗ ಅದರ ಮೇಲೆ ಶೇ 5ರಷ್ಟು ಜಿಎಸ್ಟಿ ವಿಧಿಸಿದೆ. ಅಲ್ಲದೇ, ದಿನಬಳಕೆಯ ಆಹಾರ ವಸ್ತುಗಳ ಮೇಲೆ ಜಿಎಸ್ಟಿ ಹೇರಿ ಮಧ್ಯಮವರ್ಗದ ಜನರಿಗೆ ದೊಡ್ಡ ಹೊಡೆತ ನೀಡಿದೆ’ ಎಂದು ದೂರಿದರು.
‘ಕೆಳವರ್ಗದ ಹಾಗೂ ಮಧ್ಯಮ ವರ್ಗದ ಜನರ ಜೀವನ ಇನ್ನೂ ಕಷ್ಟದಾಯಕವಾಗಬೇಕು ಎಂಬುದು ಕೇಂದ್ರದ ಬಿಜೆಪಿ ಸರ್ಕಾರದ ಉದ್ದೇಶ. ಆ ಕಾರಣಕ್ಕೆ ದಿನಬಳಕೆಯ ಆಹಾರ ಸಾಮಗ್ರಿಗಳ ಮೇಲೆ ಜಿಎಸ್ಟಿ ಹೇರಿದೆ’ ಎಂದು ಆರೋಪಿಸಿದರು.
‘ಇದು ಸರ್ಕಾರದ ಜನವಿರೋಧಿ ನೀತಿಯಂತೆಯೇ, ಬಡಜನರ ದಮನಿಸುವ ಒಂದು ಪ್ರಯೋಗ. ಮೋದಿ ಸರ್ಕಾರವು ದೇಶದ ಎಲ್ಲ ವರ್ಗಗಳ ಜನರ ಅಭಿವೃದ್ಧಿಗೆ ದುಡಿಯುವ ಬದಲು ಜನರನ್ನು ಲೂಟಿ ಮಾಡುವವಂತಹ ನೀತಿಗಳನ್ನು ಜಾರಿಗೆ ತರುತ್ತಿದೆ. ತಕ್ಷಣವೇ ಆಹಾರ ಪದಾರ್ಥಗಳು ಹಾಗೂ ಇತರ ಅಗತ್ಯ ವಸ್ತುಗಳ ಮೇಲೆ ವಿಧಿಸಿರುವ ಜಿಎಸ್ಟಿಯನ್ನು ವಾಪಸ್ ಪಡೆಯಬೇಕು’ ಎಂದು ಅವರು ಆಗ್ರಹಿಸಿದರು.
ಸಂಘಟನೆಯ ರುಮನಾ ತಾಜ್, ಸುಮಾ ರಾಜೇಂದ್ರ, ಫೌಜಿಯಾ ಬಾನು, ರೇಷ್ಮಾ ಬಾನು, ನೂರ್ ಅಸ್ಮಾ, ನಿಲೂಫರ್ ಇತರರು ಇದ್ದರು.