ಯಳಂದೂರು: ತಾಲ್ಲೂಕಿನಲ್ಲಿ ಮಳೆ ಚುರುಕಾಗಿದ್ದು, ಕೃಷಿ ಇಲಾಖೆ ರೈತರಿಗೆ ದ್ವಿದಳ ಧಾನ್ಯ ಬಿತ್ತನೆ ಬೀಜ ಪೂರೈಸಲು ಸಿದ್ಧತೆ ನಡೆಸಿದೆ.
ಎರಡು ವರ್ಷಗಳಿಂದ ಅನಾವೃಷ್ಟಿ ಆವರಿಸಿದೆ. ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಆದರೆ, ಈ ಸಲ ಮೇ ಎರಡನೇ ವಾರದಿಂದ ಮಳೆ ಸುರಿಯುವ ನಿರೀಕ್ಷೆ ಮೂಡಿಸಿದೆ. ಹಾಗಾಗಿ, ಇಲಾಖೆ ಸಾಗುವಳಿದಾರರಿಗೆ ಉದ್ದು, ಹೆಸರು ಹಾಗೂ ಹಲಸಂದೆ ಬೀಜ ವಿತರಿಸುತ್ತಿದೆ.
ತಾಲ್ಲೂಕಿನ 1500 ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯ ಬಿತ್ತನೆ ನಡೆಯಲಿದೆ. ಎಕರೆವಾರು ಪ್ರತಿ ರೈತರಿಗೆ 10 ಕೆ.ಜಿ ಬಿತ್ತನೆ ಬೀಜ ಸಿಗಲಿದೆ. ಮಳೆ ಸುರಿದರೆ ಬೆಳೆ ಕೈ ಹಿಡಿಯಲಿದೆ. ಮಳೆ ಕೊರತೆ ಕಂಡು ಬಂದಲ್ಲಿ ಫಸಲು ಕೈ ಬಿಡಲಿದೆ. ಆದರೆ, ಮಳೆ ಸುರಿಯುವ ನಿರೀಕ್ಷೆಯಿಂದ ಕೃಷಿಕರಿಗೆ ಬಿತ್ತನೆಬೀಜ ವಿತರಿಸಲಾಗುತ್ತದೆ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ವೆಂಕಟರಂಗಶೆಟ್ಟಿ ಹೇಳಿದರು.
‘ಎರಡು ದಿನಗಳಿಂದ ಮಳೆ ಬರುವ ನಿರೀಕ್ಷೆ ಮೂಡಿಸಿದೆ. ಆದರೆ, ಕೃಷಿಕರು ಬರದ ಹಿನ್ನೆಲೆಯಲ್ಲಿ ಸಾಗುವಳಿ ಸಿದ್ಧಪಡಿಸಿಲ್ಲ. ಒಂದೆರಡು ಮಳೆ ಉತ್ತಮವಾಗಿ ಸುರಿದರೆ ಮಾತ್ರ ಭೂಮಿ ಸಿದ್ಧತೆ ಸಾಧ್ಯವಾಗಲಿದೆ. ನಂತರ ಬಿತ್ತನೆ ಮಾಡಿದ್ದಲ್ಲಿ ಒಂದಷ್ಟು ಇಳುವರಿ ಪಡೆಯಬಹುದು’ ಎಂದು ರೈತ ಮಹಿಳೆ ನಿಂಗಮ್ಮ ಹೇಳಿದರು.