ಚಾಮರಾಜನಗರ: ಜಿಲ್ಲಾ ತಮಿಳು ಸಂಘದ ವತಿಯಿಂದ ಮಂಗಳವಾರ ನಗರದಲ್ಲಿ 66ನೇ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.
ಸೋಮವಾರಪೇಟೆಯ ಬಳಿ ಇರುವ ತಮಿಳು ಸಂಘದ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಪಿ.ಎನ್.ಚಿನ್ನಸ್ವಾಮಿ ಧ್ವಜಾರೋಹಣ ನೆರವೇರಿಸಿ, ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ನಂತರ ಮಾತನಾಡಿದ ಅವರು, ‘ತಮಿಳರು ಕನ್ನಡದ ಶಾಂತಿ ತೋಟದಲ್ಲಿ ಕನ್ನಡಿಗರೊಂದಿಗೆ ಅಣ್ಣ–ತಮ್ಮಂದಿರಂತೆ ಬದುಕುತ್ತಿದ್ದೇವೆ’ ಎಂದರು.
ಸಂಘದ ಕಾರ್ಯದರ್ಶಿ ಜಗದೀಶ್ ಮಾತನಾಡಿ, ‘ಕನ್ನಡದ ಜಲ, ನೆಲ, ಭಾಷೆಗೆ ಧಕ್ಕೆ ಉಂಟಾದಾಗ ನಾವೂ ಬೀದಿಗೆ ಇಳಿದು ಕನ್ನಡದ ಪರ ಹೋರಾಟ ಮಾಡಿದ್ದೇವೆ’ ಎಂದು ಹೇಳಿದರು.
‘ನಾವೆಲ್ಲ ಬಹಳ ವರ್ಷಗಳಿಂದ ಕನ್ನಡದ ನೆಲದಲ್ಲೇ ಬದುಕುತ್ತಿದ್ದು ಕನ್ನಡಿಗರಾಗಿದ್ದೇವೆ.ಕನ್ನಡದ ಬಗ್ಗೆ ನಮಗೂ ಅಭಿಮಾನ ಇದೆ’ ಎಂದು ಅವರು ತಿಳಿಸಿದರು.