ಚಾಮರಾಜನಗರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘವು (ರುಪ್ಸಾ) ಇದೇ 11ರಂದು ಬೆಳಗಾವಿಯ ಸುವರ್ಣ ಸೌಧದ ಆವರಣದಲ್ಲಿ ಧರಣಿ ನಡೆಸಲಿದೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎನ್.ನಂಜುಂಡಸ್ವಾಮಿ, ‘1995ರ ನಂತರದ ಎಲ್ಲ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು. ಖಾಸಗಿ ಶಾಲೆಗಳಲ್ಲಿ ಶೇ 25ರಷ್ಟು ಆರ್ಟಿಇ ಮಕ್ಕಳ ದಾಖಲಾತಿಯನ್ನು ಮರುಸ್ಥಾಪಿಸಬೇಕು. ಪ್ರಸ್ತುತವಾಗಿ ₹16 ಸಾವಿರ ನೀಡುವ ವೆಚ್ಚವನ್ನು ₹35 ಸಾವಿರಕ್ಕೆ ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.
ಖಾಸಗಿ ಶಾಲೆಗಳ ನವೀಕರಣ ಸಂದರ್ಭದಲ್ಲಿ ಕೇಳುವ ಅಗ್ನಿ ಸುರಕ್ಷತೆ ಹಾಗೂ ಕಟ್ಟಡ ಭದ್ರತಾ ಪ್ರಮಾಣ ಪತ್ರಗಳಲ್ಲಿ ರಿಯಾಯಿತಿ ನೀಡಬೇಕು. ಖಾಸಗಿ ಅನುದಾನ ರಹಿತ ಮಾನ್ಯತೆ ಪಡೆದ ಶಾಲೆಗಳ ನವೀಕರಣವನ್ನು 10 ವರ್ಷಗಳ ಅವಧಿಗೆ ನಿಗದಿಪಡಿಸುವಂತೆ ಶಿಕ್ಷಣ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳ ಗಮನ ಸೆಳೆದು ಮನವಿ ಸಲ್ಲಿಸಲಾಗುವುದು’ ಎಂದರು.
ಸಂಘದ ಕಾರ್ಯದರ್ಶಿಗಳಾದ ಸೋಮಶೇಖರ್, ಮಹೇಶ್ ಕುಮಾರ್, ನಿರ್ದೇಶಕರಾದ ಉಮೇಶ್ ಚಂದ್ರ, ಮುಕುಂದಾ, ಮಂಜುನಾಥ್ ಇದ್ದರು.