ಚಾಮರಾಜನಗರ: ಭಾಗಶಃ ಅನ್ಲಾಕ್ನ ಮೊದಲ ದಿನ ನಗರದ ಮಾರುಕಟ್ಟೆಯಲ್ಲಿ ತರಕಾರಿ, ಹಣ್ಣುಗಳ ವಹಿವಾಟಿಗೆ ಹೆಚ್ಚು ಧಾವಂತ ಕಂಡು ಬರಲಿಲ್ಲ.
ಮಧ್ಯಾಹ್ನ 2 ಗಂಟೆಯವರೆಗೂ ಮಳಿಗೆಗಳನ್ನು ತೆರೆಯಲು ಅವಕಾಶ ಇದ್ದುದರಿಂದ ಜನರು ಕೊಂಚ ನಿಧಾನವಾಗಿಯೇ ಮಾರುಕಟ್ಟೆಯತ್ತ ಹೆಜ್ಜೆ ಹಾಕಿದರು. ಹಾಪ್ಕಾಮ್ಸ್ನಲ್ಲಿ ಒಂದೆರಡು ತರಕಾರಿಗಳ ಬೆಲೆ ಹೆಚ್ಚಾಗಿದ್ದು, ಬಿಟ್ಟರೆ ಉಳಿದವುಗಳ ಧಾರಣೆಯಲ್ಲಿ ಬದಲಾವಣೆಯಾಗಿಲ್ಲ. ಹಣ್ಣುಗಳ ಬೆಲೆಯೂ ಯಥಾಸ್ಥಿತಿ ಮುಂದುವರಿದಿದೆ.
ಹಲವು ತಿಂಗಳುಗಳಿಂದ ಸ್ಥಿರವಾಗಿದ್ದ ಟೊಮೆಟೊ ಬೆಲೆ (ಕೆಜಿಗೆ ₹10) ಈ ವಾರ ₹5 ಜಾಸ್ತಿಯಾಗಿದೆ. ಕೆಜಿಗೆ ₹20ರಷ್ಟಿದ್ದ ಕ್ಯಾರೆಟ್ ಬೆಲೆ ಸೋಮವಾರ ₹10 ಏರಿಕೆ ಕಂಡು ₹30 ಆಗಿದೆ. ಕೆಜಿಗೆ ₹50ರಷ್ಟಿದ್ದ ಬೆಂಡೇಕಾಯಿ ಬೆಲೆ ಈ ವಾರ ₹40ಕ್ಕೆ ಇಳಿದಿದೆ. ಉಳಿದಂತೆ ಬೀನ್ಸ್ (₹60), ಆಲೂಗಡ್ಡೆ (₹30), ಮೂಲಂಗಿ (₹30), ಈರುಳ್ಳಿ (₹30) ಸೇರಿದಂತೆ ಇತರ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಸೊಪ್ಪುಗಳ ಬೆಲೆ ಕಟ್ಟಿಗೆ ₹10ರಿಂದ ₹15ವರೆಗೆ ಇದೆ.
‘ಹಲವು ಸಮಯದ ನಂತರ ಟೊಮೆಟೊ ಬೆಲೆ ಜಾಸ್ತಿಯಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಆವಕವಾಗುತ್ತಿಲ್ಲ. ಈ ಕಾರದಿಂದ ಬೆಲೆ ಹೆಚ್ಚಾಗಿದೆ. ಕ್ಯಾರೆಟ್ಗೂ ಈಗ ಬೇಡಿಕೆ ಸ್ವಲ್ಪ ಹೆಚ್ಚು ಕಂಡು ಬರುತ್ತಿದೆ’ ಎಂದು ಹಾಪ್ಕಾಮ್ಸ್ ವ್ಯಾಪಾರಿ ಮಧು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಹಣ್ಣುಗಳು ಯಥಾಸ್ಥಿತಿ: ಮೂರು ವಾರಗಳಿಂದ ಬಹುತೇಕ ಎಲ್ಲ ಹಣ್ಣುಗಳ ಬೆಲೆ ಸ್ಥಿರವಾಗಿದೆ. ಹಾಪ್ಕಾಮ್ಸ್ನಲ್ಲಿ ಸೇಬಿಗೆ ₹200, ಮೂಸಂಬಿ, ಕಿತ್ತಳೆಗೆ ₹140, ದಾಳಿಂಬೆಗೆ ₹140 ಇದೆ. ಏಲಕ್ಕಿ, ಪಚ್ಚೆ ಬಾಳೆಗೆ ಕ್ರಮವಾಗಿ ₹40 ಹಾಗೂ ₹20 ಇದೆ. ಮಾವಿನಹಣ್ಣುಗಳಿಗೆ ₹50ರಿಂದ ₹80ರವರೆಗೂ ಇದೆ.
ಹೂವಿನ ವಹಿವಾಟು ಆರಂಭ: ಲಾಕ್ಡೌನ್ ಕಾರಣಕ್ಕೆ ಮುಚ್ಚಿದ್ದ ಚೆನ್ನೀಪುರಮೋಳೆಯ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ವಾರದಿಂದೀಚೆಗೆ ವಹಿವಾಟು ಆರಂಭವಾಗಿದೆ. ವ್ಯಾಪಾರ ನಿಧಾನವಾಗಿ ಚೇತರಿಸುತ್ತಿದೆ ಎಂದು ಹೇಳುತ್ತಾರೆ ವ್ಯಾಪಾರಿಗಳು.
ಕನಕಾಂಬರ ಕೆಜಿಗೆ ₹600, ಮಲ್ಲಿಗೆ ₹120, ಸೇವಂತಿಗೆ ₹100, ಚೆಂಡು ಹೂವು ₹30, ಸುಗಂಧರಾಜ ₹20 ಇತ್ತು.
‘ವಾರದ ಹಿಂದೆ ವ್ಯಾಪಾರ ಆರಂಭಿಸಿದ್ದೇವೆ. ನಿಧಾನವಾಗಿ ಹೂವುಗಳಿಗೆ ಬೇಡಿಕೆ ಬರುತ್ತಿದೆ. ಸಹಜ ಸ್ಥಿತಿಗೆ ಮರಳಲು ಇನ್ನೂ ಕೆಲವು ದಿನಗಳು ಬೇಕು’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ತಿಳಿಸಿದರು.