ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಮೇಲಾಜಿಪುರದಲ್ಲಿ ಟೊಮೆಟೊ ಕ್ಷೇತ್ರೋತ್ಸವ

Published 27 ಡಿಸೆಂಬರ್ 2023, 8:00 IST
Last Updated 27 ಡಿಸೆಂಬರ್ 2023, 8:00 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ  ಪರಿಸರ ಸ್ನೇಹಿ ವಿಧಾನಗಳಿಂದ ಅರ್ಕ ಅಭೇದ್ ಟೊಮೆಟೊ ತಳಿಯ ಬೆಳೆಯ ಸಮಗ್ರ ನಿರ್ವಹಣೆ ಪ್ರಾತ್ಯಕ್ಷಿಕೆ ಕ್ಷೇತ್ರೋತ್ಸ ಮೇಲಾಜಿಪುರ ಗ್ರಾಮದಲ್ಲಿ ನಡೆಯಿತು.  

ಟೊಮೆಟೊ ಕೃಷಿಯಲ್ಲಿ ಪರಿಸರ ಸ್ನೇಹಿ ನಿರ್ವಹಣಾ ತಂತ್ರಜ್ಞಾನಗಳನ್ನು ಗ್ರಾಮದ ಆಯ್ದ ಟೊಮೆಟೊ ಬೆಳೆಗಾರರಿಗೆ ಪರಿಚಯಿಸಲಾಯಿತು. 

ಕೇಂದ್ರದ ತೋಟಗಾರಿಕಾ ವಿಜ್ಞಾನಿ ಮೋಹನ್ ಕುಮಾರ್.ಎ.ಬಿ. ಮಾತನಾಡಿ, ‘ಟೊಮೆಟೊ ಸಂಕರಣ ತಳಿ ಅರ್ಕ ಅಭೇದ್ ರೋಗ ನಿರೋಧಕ ಶಕ್ತಿ ಹೊಂದಿರುವ ಉತ್ತಮ ತಳಿ. ಎಲೆ ಸುರಳಿ ನಂಜಾಣು ರೋಗ, ದಂಡಾಣು ಸೊರಗು ರೋಗ, ಅಂಗಮಾರಿ ರೋಗಗಳಿಗೆ ಸಹಿಷ್ಣುತೆ ಹೊಂದಿದೆ’ ಎಂದು ತಿಳಿಸಿದರು.

‘ಇದು ಜನರು ಸಾಮಾನ್ಯವಾಗಿ ಬಳಸುವ ಹುಳಿ ಹಣ್ಣುಗಳನ್ನು ಕೊಡುವ ತಳಿಯಾಗಿದ್ದು ಉತ್ತಮ ಇಳುವರಿ ನೀಡಿ, ಆರ್ಥಿಕ ಲಾಭ ಹೊಂದಲು ಸಹಕಾರಿಯಾಗಿದೆ. ರೈತರು ವೈಜ್ಞಾನಿಕವಾಗಿ ಈ ತಳಿಯನ್ನು ಸಸ್ಯ ಕ್ಷೇತ್ರಗಳಲ್ಲಿ (ನರ್ಸರಿ) ಬೆಳೆಸಿ, ಶಿಫಾರಸು ಮಾಡಿದ ಅಂತರದಲ್ಲಿ ನಾಟಿ ಮಾಡಿ ನಿರ್ದಿಷ್ಟ ಸಸಿ ಸಂಖ್ಯೆಗಳನ್ನು ಕಾಯ್ದುಕೊಳ್ಳಬೇಕು. ಮಣ್ಣು ಪರೀಕ್ಷೆ ಆಧಾರಿತವಾಗಿ ರಸಗೊಬ್ಬರಗಳನ್ನು ನಿಗದಿತ ಸಮಯದಲ್ಲಿ ಒದಗಿಸಬೇಕು. ಇದರ ಜೊತೆಗೆ ದ್ರವರೂಪದ ಸಾವಯವ ಗೊಬ್ಬರಗಳಾದ ಜೀವಾಮೃತ, ಪಂಚಗವ್ಯ, ಎರೆಜಲ, ಹ್ಯೂಮಿಕ್ ಆಮ್ಲಗಳನ್ನು ಬಳಕೆ ಮಾಡುವುದರಿಂದ ಉತ್ತಮ ಬೆಳವಣಿಗೆ ಕಂಡು ಬರಲಿದೆ’ ಎಂದರು. 

ಕೃಷಿ ವಿಜ್ಞಾನ ಕೇಂದ್ರದ ಹಿರಿಯ ತಾಂತ್ರಿಕ ಅಧಿಕಾರಿ ಬಿ. ಪಂಪನಗೌಡ ಮಾತನಾಡಿ, ‘ವಿವೇಚನಾ ರಹಿತ ರಾಸಾಯನಿಕಗಳು, ಅದರಲ್ಲೂ ಕೀಟನಾಶಕಗಳು ಮತ್ತು ರೋಗನಾಶಕಗಳನ್ನು ಬಳಸಿದ್ದಲ್ಲಿ ಈ ರೋಗಕಾರಕಗಳು ಮತ್ತು ಕೀಟಗಳು ಸಹಿಷ್ಣುತೆ ವೃದ್ಧಿಸಿಕೊಂಡು ಹೆಚ್ಚಿನ ಆರ್ಥಿಕ ಹಾನಿ ಉಂಟುಮಾಡುತ್ತವೆ’ ಎಂದು ತಿಳಿಸಿದರು.

‘ಪರಿಸರ ಸ್ನೇಹ ನಿರ್ವಹಣಾ ಕ್ರಮಗಳಾದ ಬೇವಿನ ಉತ್ಪನ್ನಗಳ ಬಳಕೆ, ಮೋಹಕ ಬಲೆಗಳು, ಅಂಟು ಬಲೆಗಳು, ಜೈವಿಕ ರೋಗ ಹಾಗೂ ಕೀಟನಾಶಕಗಳಾದ ಟ್ರೈಕೋಡರ್ಮ, ಸೂಡೊಮೋನಾಸ್ ಮತ್ತು ಪೆಸಿಲಿಯೋಮೈಸಿಸ್ ಬಳಸಬೇಕು’ ಎಂದು ಸಲಹೆ ನೀಡಿದರು. 

ಚಾಮರಾಜನಗರ ತಾಲ್ಲೂಕಿನ ಹಿರಿಯ ಸಹಾಯಕ ತೊಟಗಾರಿಕಾ ನಿರ್ದೇಶಕ ಸಿದ್ದರಾಜು ಮಾತನಾಡಿದರು. 

ಪ್ರಗತಿಪರ ರೈತರಾದ ಮಹದೇವಪ್ಪ, ನಾಗೇಂದ್ರಪ್ರಸಾದ್ ಸೇರಿದಂತೆ 50ಕ್ಕೂ ಹೆಚ್ಚು ರೈತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT