ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋದರಿಯರಿಗೆ ಲೈಂಗಿಕ ಕಿರುಕುಳ; ಸೋದರರ ಬಂಧನ

ಹಣ್ಣಿನ ರಸ ಕುಡಿಸಿ ಪಜ್ಞೆ ತಪ್ಪಿಸಿ ಅಪ‍ಹರಣ ಮಾಡಿದ ಆರೋಪ
Last Updated 3 ಫೆಬ್ರುವರಿ 2020, 15:34 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಇನ್ನೂ ವಯಸ್ಸಿಗೆ ಬಂದಿರದ ಸಹೋದರಿಯರನ್ನು ಅಪಹರಿಸಿ, ಅವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ತಾಲ್ಲೂಕಿನ ಗ್ರಾಮವೊಂದರ ಸಹೋದರರನ್ನು ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಅರ್ಮುಗಂ (26) ಮತ್ತು ಅರವಿಂದ (22) ಬಂಧಿತ ಅಣ್ಣ ತಮ್ಮಂದಿರು. ಪಕ್ಕದ ಊರಿನ 15 ಮತ್ತು 16 ವರ್ಷದ ಅಕ್ಕ ತಂಗಿಯರನ್ನು ಅಪ‍‌ಹರಿಸಿ, ತಮಿಳುನಾಡಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ಇಬ್ಬರ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಜನವರಿ 29ರಂದು ರಾತ್ರಿ 8 ಗಂಟೆ ಸುಮಾರಿಗೆ ನೀರು ತರುವುದಕ್ಕಾಗಿ ಇಬ್ಬರು ಹೆಣ್ಣುಮಕ್ಕಳು ಮನೆಯಿಂದ ಹೋದವರು ವಾಪಸ್‌ ಬಂದಿರಲಿಲ್ಲ. ತುಂಬ ಹೊತ್ತಾದರೂ ಮಕ್ಕಳು ಮನೆಗೆ ಬರದೇ ಇರುವುದರಿಂದ ಗಾಬರಿಗೊಂಡ ತಾಯಿ ಹಾಗೂ ಸಂಬಂಧಿಕರು ಎಲ್ಲ ಕಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಫೆ.1ರಂದು ಗ್ರಾಮಾಂತರ ಠಾಣೆಗೆ ಬಂದ ತಾಯಿ, ಇಬ್ಬರು ಹೆಣ್ಣು ಮಕ್ಕಳು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಅದೇ ದಿನ ರಾತ್ರಿ ಬಾಲಕಿಯೊಬ್ಬಳು ಗ್ರಾಮಕ್ಕೆ ಬಂದು, ಅರ್ಮುಗಂ ಹಾಗೂ ಅರವಿಂದ ಅವರು ಇಬ್ಬರಿಗೂ ಹಣ್ಣಿನ ರಸ ಕುಡಿಸಿ ಪ್ರಜ್ಞೆ ತಪ್ಪಿಸಿ ಕರೆದುಕೊಂಡು ಹೋಗಿ ತಮಿಳುನಾಡಿನ ಸೇಲಂನ ಮನೆಯೊಂದರಲ್ಲಿ ಇರಿಸಿದ್ದರು. ತಾನು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾಗಿ ಮನೆಯವರಿಗೆ ತಿಳಿಸಿದ್ದಳು’ ಎಂದು ಅವರು ಮಾಹಿತಿ ನೀಡಿದ್ದಾರೆ.

ಭಾನುವಾರ (ಫೆ.2) ಮನೆಯವರು ಪೊಲೀಸರ ಸಹಾಯದಿಂದ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಸೇಲಂಗೆ ಭೇಟಿ ನೀಡಿ ಮನೆಯೊಂದರಲ್ಲಿ ಇನ್ನೊಬ್ಬ ಬಾಲಕಿ ಪತ್ತೆಯಾದಳು. ಆರೋಪಿಗಳಾದ ಅಣ್ಣ ತಮ್ಮಂದಿರೂ ಅಲ್ಲೆ ಇದ್ದರು. ಅವರನ್ನು ವಶಕ್ಕೆ ಪಡೆದ ಪೊಲೀಸರು, ಕೊಳ್ಳೇಗಾಲಕ್ಕೆ ಕರೆದುಕೊಂಡು ಬಂದರು.

ಸರ್ಕಲ್‌ ಇನ್‌ಸ್ಪೆಕ್ಟರ್‌ ಶ್ರೀಕಾಂತ್‌, ಸಬ್‌ ಇನ್‌ಸ್ಪೆಕ್ಟರ್‌ ಅಶೋಕ್‌ ಅವರು ಬಾಲಕಿಯರು ಹಾಗೂ ಆರೋಪಿಗಳನ್ನು ಭಾನುವಾರ ವಿಚಾರಣೆಗೆ ಒಳಪಡಿಸಿದರು.

ಆರೋಪಿಗಳ ಮೇಲೆ ಅಪಹರಣ ಹಾಗೂ ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಲು ಕ್ರಮ ಕೈಗೊಂಡಿದ್ದಾರೆ.

ಬಾಲಕಿಯರನ್ನು ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ತಾಯಿಯ ವಶಕ್ಕೆ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT