ಯಳಂದೂರು: ಇನ್ನೂ ಮುಂದೆ ಬಾಲಕಿಯರು ಧೈರ್ಯವಾಗಿ ಠಾಣೆಗೆ ಬಂದು ಪೊಲೀಸರನ್ನು ಮಾತನಾಡಿಸಬಹುದು. ಕಾಯ್ದೆ, ಕಾನೂನುಗಳ ಬಗ್ಗೆ ಪ್ರಶ್ನಿಸಬಹುದು. ಭಯ ಪಡಬೇಕಿಲ್ಲ ಎಂದು ಪಿಎಸ್ಐ ನಂದೀಶ್ ಕುಮಾರ್ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಆಯೋಜಿಸಿದ್ದ ತೆರೆದಮನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿಂದಿನ ದಿನಗಳಲ್ಲಿ ಪೊಲೀಸರನ್ನು ಕಂಡರೆ ವಿದ್ಯಾರ್ಥಿಗಳು ಓಡುತ್ತಿದ್ದರು. ಸಮಾಜದಲ್ಲೂ ಆರಕ್ಷರ ಬಗ್ಗೆ ಉತ್ತಮ ಒಡನಾಟ ಇರಲಿಲ್ಲ. ಆದರೆ, ಈಗ ಕಾನೂನು ಮತ್ತು ಕಾಯ್ದೆ ಜನಪರವಾಗಿದ್ದು, ಮಕ್ಕಳಿಗೂ ಐಪಿಸಿ ಕೋಡ್ ಕಾನೂನುಗಳ ಬಗ್ಗೆ ತಿಳಿ ಹೇಳಬೇಕಿದೆ ಎಂದರು.
ಮಹಿಳಾ ಜೆಎಸ್ಎಸ್ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿನಿಯರು ಹತ್ತಾರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು. ಪೋಕ್ಸೊ ಕಾಯ್ದೆ, ವಾರೆಂಟ್, ಮಕ್ಕಳ ರಕ್ಷಣೆ, ಬಾಲಕಿಯರಿಗೆ ಇರುವ ಸೌಲಭ್ಯಗಳ ಬಗ್ಗೆ ಸಂವಾದ ನಡೆಯಿತು.
ಎಎಸ್ಐ ಚಂದ್ರಶೇಖರ್, ಸಿಬ್ಬಂದಿ ನಾಗೇಂದ್ರ, ಎ ಎಸ್ ಜೆ ಪಿ ಯೂ ಘಟಕದ ಪೊಲೀಸ್ ಕಾನ್ಸ್ಟೆಬಲ್ ಕವಿತಾ ಹಾಗೂ ಶಿಕ್ಷಕರು, ಮಕ್ಕಳು ಭಾಗವಹಿಸಿದ್ದರು.