ಯಳಂದೂರು: ಪ್ರಸಿದ್ಧ `ಕಂದಹಳ್ಳಿ ಮಾದಪ್ಪ~ನ ದೇವಸ್ಥಾನದಲ್ಲಿ ಬುಧವಾರ ಭೀಮನ ಅಮವಾಸ್ಯೆ ನಿಮಿತ್ತ ನಡೆದ ರಥೋತ್ಸವ ಹಾಗೂ ವಿಶೇಷ ಪೂಜೆಗೆ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ಭಾವೈಕ್ಯದ ಸಂಕೇತವಾದ ಈ ದೇವರ ಉತ್ಸವಕ್ಕೆ ಎಲ್ಲಾ ಜನಾಂಗದವರೂ ಸೇರಿ ಆಚರಿಸುವ ವಾಡಿಕೆ ಇದೆ. 13ನೇ ವರ್ಷದ ನಿಮಿತ್ತ ಹಮ್ಮಿಕೊಂಡಿದ್ದ ಈ ಉತ್ಸವದಲ್ಲಿ ಬೆಳಿಗ್ಗೆಯಿಂದಲೇ ದೇವರಿಗೆ ಹಾಲಿನ ಅಭ್ಯಂಜನ, ಎಣ್ಣೆಮಜ್ಜನ, ಬಿಲ್ವಪತ್ರೆ, ಪುಷ್ಪಾರ್ಚನೆ ಮಾಡಿ ಬೆಳ್ಳಿಯ ಕೊಳಗವನ್ನು ಧರಿಸಿ ನಂತರ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಅಕ್ಕಪಕ್ಕದ ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ದೇವರ ದರ್ಶನ ಪಡೆದರು.
ಅನ್ನ ಸಂತರ್ಪಣೆ ಇಲ್ಲಿಯ ವಿಶೇಷ: ಪ್ರತಿ ವರ್ಷದಂತೆ ಈ ವರ್ಷವೂ ಅನ್ನ ಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಭಕ್ತರಿಂದ ಸಂಗ್ರಹಸಿದ ದವಸಧಾನ್ಯಗಳೂ ಸಹ ಇಲ್ಲಿ ಆಹಾರ ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತದೆ. ದೇಗುಲದ ಆವರಣದಲ್ಲಿರುವ ಆಲದ ಮರಗಳ ಕೆಳಗೆ ಸರತಿ ಸಾಲಿನಲ್ಲಿ ಕಾದು ನಿಂತು ಪಂಕ್ತಿಯಲ್ಲಿ ಕುಳಿತು ಆಹಾರ ಸೇವಿಸಿದರು. ಬುಧವಾರ ನಡೆದ ಉತ್ಸವದಲ್ಲಿ ಸುಮಾರು 60 ಸಾವಿರಕ್ಕೂ ಹೆಚ್ಚು ಭಕ್ತರು ಪ್ರಸಾದವನ್ನು ಸ್ವೀಕರಿಸಿದರು.
ಇದರ ಅಂಗವಾಗಿ ಮಹದೇಶ್ವರನ ಕಥೆಯ ಕಾರ್ಯಕ್ರ ಮವನ್ನು ಹಮ್ಮಿಕೊಳ್ಳಲಾಗಿತ್ತು. ಕಡ್ಲೆಪುರಿ, ಹಣ್ಣುಕಾಯಿ, ಮಿಠಾಯಿ, ಕಜ್ಜಾಯ, ಚಕ್ಕುಲಿ, ಮಕ್ಕಳ ಆಟಿಕೆ ಸಾಮಾನಿನ ನೂರಾರು ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರವಾಯಿತು.
ಸರ್ಕಲ್ ಇನ್ಸ್ಪೆಕ್ಟರ್ ಕೀರ್ತಿಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.