ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಪ್ರವಾಸಿಗರಿಲ್ಲದ ತಣ್ಣನೆಯ ಹಾದಿ

ಒಂದೂವರೆ ತಿಂಗಳಿನಿಂದ ಪ್ರವೇಶ ಬಂದ್; ಆಹಾರಕ್ಕೆ ಎದುರು ನೋಡುವ ಮಂಗಗಳು
Last Updated 9 ಅಕ್ಟೋಬರ್ 2021, 7:40 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ದಿಬ್ಬ ಕುಸಿದು ಒಂದೂವರೆ ತಿಂಗಳ ಮೇಲಾಗಿದೆ. ಅಂದಿನಿಂದ ಗಿರಿಧಾಮದ ಪ್ರವೇಶದ ಹಾದಿಯೂ ಬಂದ್ ಆಗಿದೆ. ಸದಾ ಜನರಿಂದ ಗಿಜಿಡುತ್ತಿದ್ದ ನಂದಿ ಈಗ ಪೂರ್ಣ ಖಾಲಿ ಖಾಲಿ. ಪ್ರವಾಸಿಗರಿಲ್ಲದ ನಂದಿಗಿರಿಧಾಮ ಹೇಗಿದೆ? ಎನ್ನುವ ಬಗ್ಗೆ ‘ಪ್ರಜಾವಾಣಿ’ ಪ್ರತಿನಿಧಿ ವರದಿ ಮಾಡಲು ತೆರಳಿದಾಗ, ಜನರಿಲ್ಲದ ನಂದಿ ಮತ್ತಷ್ಟು ತಣ್ಣಗಿರುವುದು ಕಂಡಿತು.

ಬೈಕು, ಕಾರುಗಳ ಸದ್ದಿನಿಂದ ರಸ್ತೆಯನ್ನು ಬಿಟ್ಟು ಏಳುತ್ತಿದ್ದ ಕಸ, ಮುರಿದ ಟೊಂಗೆಗಳು, ರಸ್ತೆಗೆ ಸುರಿದ ಹೂ ರಾಶಿ...ಹೀಗೆ ಸದಾ ಮನುಷ್ಯರ ಹೆಜ್ಜೆ ಗುರುತಿನಿಂದ ತೊಯ್ಯುತ್ತಿದ್ದ ನೆಲೆದಲ್ಲಿ ಈಗ ಆ ಗುರುತುಗಳಿಲ್ಲ ಎನ್ನುವಂತೆ ಪ್ರಶಾಂತವಾಗಿದೆ.

ಗಿರಿಧಾಮಕ್ಕೆ ಶನಿವಾರ ಮತ್ತು ಭಾನುವಾರ 40ರಿಂದ 45 ಸಾವಿರ ಮಂದಿ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಉಳಿದ ದಿನಗಳಲ್ಲಿಯೂ ಹೆಚ್ಚಿನ ಜನಸಂದಣಿಯೇ ಇರುತ್ತಿತ್ತು. ಕಿರಿಯರು, ಪ್ರೇಮಿಗಳು, ಸ್ನೇಹಿತರು, ವಿವಾಹಿತರು, ಹಿರಿಯರು...ಹೀಗೆ ವಿವಿಧ ವಯೋಮಾನದ ಜನರಿಂದ ತುಂಬಿ ತುಳುಕುತ್ತಿತ್ತು. ಕೆಲವು ಸಮಯದಲ್ಲಿ ಕಿಲೋಮೀಟರ್‌ಗಟ್ಟಲೆ ನಂದಿಯ ಹಾದಿ ಸಂಚಾರ ದಟ್ಟಣೆಗೆ ಸಿಲುಕಿದ್ದೂ ಇದೆ. ಪ್ರವಾಸಿಗರ ಅಪಾರ ಒತ್ತಡ ಎದುರಾಗಿದ್ದು ಇದೆ.

ಇಂತಿಪ್ಪ ನಂದಿಯ ಅಂಗಳ ಈಗ ಖಾಲಿ ಖಾಲಿ. ಬೈಕ್, ಕಾರುಗಳ ಓಡಾಟದಿಂದ ರಸ್ತೆಯಲ್ಲಿ ದೂಳು ಸಹ ನಿಲ್ಲುತ್ತಿರಲಿಲ್ಲ. ಆದರೆ ಈಗ ರಸ್ತೆ ಹೂಗಳಿಂದ ಮುಚ್ಚಿದೆ. ಹೋ ತೋಟಕ್ಕೆ ತೆರಳಿದಂತೆ ಭಾಸವಾಗುತ್ತದೆ. ಬೈಕ್ ಕಾರುಗಳ ಓಡಾಟದಿಂದ ರಸ್ತೆ ಬದಿಯಲ್ಲಿ ಗಿಡಗಳು ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟಸಾಧ್ಯವಾಗಿತ್ತು. ಆದರೆ ಈಗ ಗಿಡಗಳು ರಸ್ತೆಗೆ ಮುತ್ತಿಕ್ಕಿವೆ.

ಆಹಾರಕ್ಕೆ ಕಾತುರ: ನಂದಿಬೆಟ್ಟದಲ್ಲಿ ಅಪಾರ ಸಂಖ್ಯೆಯಲ್ಲಿ ಮಂಗಗಳಿವೆ. ಪ್ರವಾಸಿಗರು ಗಿರಿಧಾಮಕ್ಕೆ ಬರುವಾಗ ಅವರು ಮಂಗಗಳಿಗೆ ಆಹಾರ ನೀಡುತ್ತಿದ್ದರು. ಕೆಲವು ಸಂಘ ಸಂಸ್ಥೆಗಳು ಹಾಗೂ ಯುವಕರು ಹಣ್ಣು, ತರಕಾರಿ ಸೇರಿದಂತೆ ಆಹಾರವನ್ನು ಕಾರುಗಳಲ್ಲಿ ತಂದು ಮಂಗಗಳಿಗೆ ನೀಡುತ್ತಿದ್ದರು. ಆದರೆ ಈಗ ರಸ್ತೆ ಬಂದ್ ಆಗಿರುವುದರಿಂದ ಈ ವಾನರಗಳಿಗೆ ಆಹಾರ ದೊರೆಯುವುದು ದುರ್ಲಭವಾಗಿದೆ.

ಒಂದೂವರೆ ತಿಂಗಳಿನಿಂದ ಪ್ರವಾಸಿಗರು ಇಲ್ಲದ ಕಾರಣ ರಸ್ತೆ ಕಾಮಗಾರಿಗೊ ಅಥವಾ ಗಿರಿಧಾಮದಲ್ಲಿರುವ ತೋಟಗಾರಿಕೆ, ಪ್ರವಾಸೋದ್ಯಮದ ನಿಗಮದ ಅಧಿಕಾರಿಗಳು ದಾರಿಯಲ್ಲಿ ಸಾಗುವಾಗ ಮಂಗಳು ಹಿಂಬಾಲಿಸುತ್ತವೆ. ಬೈಕ್‌ಗಳು ಬಂದ ತಕ್ಷಣವೇ ಮರದಿಂದ ಜಿಗಿದು ರಸ್ತೆಗೆ ಬರುತ್ತವೆ. ಆಹಾರ ತಂದಿದ್ದಾರಾ ಎನ್ನುವ ಕಾತುರ ಅವುಗಳದ್ದು.

‘ಈಗಲೂ ಅಪರೂಪಕ್ಕೆ ಒಮ್ಮೆ ಕೆಲವೊಬ್ಬರು ತರಕಾರಿ, ಹಣ್ಣುಗಳನ್ನು ತರುತ್ತಾರೆ. ಮಾನವೀಯ ದೃಷ್ಟಿಯಿಂದ ಆಹಾರ ನೀಡಲು ಬಿಡುತ್ತಿದ್ದೇವೆ. ಇಲ್ಲಿ ಅವುಗಳಿಗೆ ನೈಸರ್ಗಿಕವಾಗಿ ಆಹಾರವೇನೂ ಸಿಗುತ್ತಿಲ್ಲ. ನಮಗೆ ಪಾಪ ಎನಿಸುತ್ತದೆ’ ಎನ್ನುತ್ತಾರೆ ಭದ್ರತೆಗಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT