ಗೌರಿಬಿದನೂರು: ‘ಶತಮಾನಗಳಿಂದ ಉತ್ತಮ ಸಂಸ್ಕೃತಿ, ನಾಗರಿಕತೆ ಹಾಗೂ ಪರಂಪರೆಯನ್ನು ಹೊಂದಿರುವ ನಾಡಿನ ಭಾಷೆ, ನೆಲ ಮತ್ತು ಜಲವನ್ನು ಸಂರಕ್ಷಣೆ ಮಾಡಲು ನಾವೆಲ್ಲರೂ ಒಮ್ಮತದಿಂದ ಶ್ರಮಿಸೋಣ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಪ್ರೊ.ಕೋಡಿರಂಗಪ್ಪ ತಿಳಿಸಿದರು.
ನಗರದಲ್ಲಿ ಬುಧವಾರ ಜಿಲ್ಲಾ ಕಸಾಪ ಚುನಾವಣೆ ಅಂಗವಾಗಿ ಮತಯಾಚಿಸಿ ಅವರು ಮಾತನಾಡಿದರು.
ನಾಡಿನಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ತನ್ಮದೇ ಹಿರಿಮೆ ಗರಿಮೆಗಳಿವೆ. ಅದನ್ನು ಉಳಿಸಿ ಬೆಳೆಸುವ ಜತೆಗೆ ಇಂದಿನ ಯುವಕರಲ್ಲಿ ಜಾಗೃತಿ ಮೂಡಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಈ ಬಾರಿಯ ಜಿಲ್ಲಾ ಕಸಾಪ ಚುನಾವಣೆಗೆ ಸ್ಪರ್ಧಿಸಿದ್ದು ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಸಾಹಿತ್ಯ ಭವನ ನಿರ್ಮಾಣದ ಜತೆಗೆ ಗ್ರಾಮೀಣ ಭಾಗದಲ್ಲಿನ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ ಗಡಿ ಭಾಗದಲ್ಲಿ ಭಾಷೆಯ ಪ್ರಾಬಲ್ಯ ಮೆರೆಯಬೇಕು ಎಂದು ಹೇಳಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ವಿ. ರವೀಂದ್ರನಾಥ್ ಮಾತನಾಡಿ, ಸುಮಾರು ಮೂರು ದಶಕಗಳ ಕಾಲ ಜಿಲ್ಲೆಯಲ್ಲಿ ಸಾವಿರಾರು ಮಂದಿ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯ ಜತೆಗೆ ಉಜ್ವಲವಾದ ಬದುಕು ರೂಪಿಸಿಕೊಳ್ಳಲು ಸಹಕಾರಿಯಾದ ಶಿಕ್ಷಣ ತಜ್ಞ ಕೋಡಿರಂಗಪ್ಪ ಅವರು ಕನ್ನಡ ಭಾಷೆಯ ಉಳಿವಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಅವರಿಗೆ ಎಲ್ಲರೂ ಬೆಂಬಲ ನೀಡಬೇಕು ಎಂದು ತಿಳಿಸಿದರು.
ಇದೇ ವೇಳೆ ಸಾಹಿತ್ಯಾಭಿಮಾನಿಗಳಾದ ವೀರಣ್ಣ, ಪ್ರೊ.ಕೆ. ರಾಮಾಂಜನೇಯಲು, ಆರ್. ಜನಾರ್ದನ ಮೂರ್ತಿ, ಕೆ.ವಿ. ಪ್ರಕಾಶ್, ಮಂಚನಬೆಲೆ ಶ್ರೀನಿವಾಸ್, ಬಾಲಪ್ಪ, ಉಷಾ, ಹನುಮಂತಯ್ಯ, ಕೃಷ್ಣಕುಮಾರಿ, ಪ್ರವೀಣ್, ಟಿ. ನಂಜುಂಡಪ್ಪ, ಸಂಕೇತ್ ಶ್ರೀರಾಮ್, ಗಿರಿಧರ್, ಗೌರೀಶ್ ಹಾಜರಿದ್ದರು.