ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗೇಪಲ್ಲಿ: ತಂಗುದಾಣ ಇಲ್ಲದೆ ಪ್ರಯಾಣಿಕರಿಗೆ ತೊಂದರೆ

Published 13 ಮೇ 2024, 5:42 IST
Last Updated 13 ಮೇ 2024, 5:42 IST
ಅಕ್ಷರ ಗಾತ್ರ

ಬಾಗೇಪಲ್ಲಿ: ತಾಲ್ಲೂಕು ಕೇಂದ್ರದ ಡಿವಿಜಿ ಮುಖ್ಯರಸ್ತೆಯಲ್ಲಿನ ಮುಖ್ಯರಸ್ತೆ ವೃತ್ತಗಳಲ್ಲಿ ತಂಗುದಾಣ ಇಲ್ಲದೇ ಪ್ರಯಾಣಿಕರು ತೊಂದರೆ ಪಡುವಂತೆ ಆಗಿದೆ.

ಪಟ್ಟಣದ ಪುರಸಭಾ ವ್ಯಾಪ್ತಿಗೆ ಸಿವಿಲ್ ನ್ಯಾಯಾಲಯದಿಂದ ನ್ಯಾಷನಲ್ ಕಾಲೇಜಿನವರೆಗೆ ಮುಖ್ಯರಸ್ತೆ ಇದೆ. ಇದೇ ಮುಖ್ಯರಸ್ತೆಯಲ್ಲಿ ವ್ಯಾಪಾರ ವಹಿವಾಟುಗಳು ಹೆಚ್ಚಾಗಿವೆ. ಮುಖ್ಯರಸ್ತೆಯ ಪಕ್ಕದಲ್ಲಿ ತಾಲ್ಲೂಕು ಕಚೇರಿ, ತಾಲ್ಲೂಕು ಪಂಚಾಯಿತಿ, ಸಾರ್ವಜನಿಕ ಆಸ್ಪತ್ರೆ, ಪೊಲೀಸ್ ಠಾಣೆ, ಬಸ್ ನಿಲ್ದಾಣ, ಪುರಸಭೆ ಸೇರಿದಂತೆ ಸರ್ಕಾರಿ ಕಚೇರಿ ಇವೆ. ಸರ್ಕಾರಿ ಕಿರಿಯ, ಹಿರಿಯ, ಪ್ರೌಢಶಾಲೆಗಳು, ಕಾಲೇಜುಗಳು ಇವೆ.

ಪಟ್ಟಣದ ಸಿವಿಲ್ ನ್ಯಾಯಾಲಯ, ಬಸ್ ನಿಲ್ದಾಣ, ಉರ್ದು ಶಾಲೆ(ಮರಿಮಾನು), ಗಂಗಮ್ಮ ಗುಡಿ ಮುಂದೆಯ ರಸ್ತೆ, ಡಾ.ಎಚ್.ಎನ್.ವೃತ್ತ, ನ್ಯಾಷನಲ್ ಕಾಲೇಜುಗಳ ಮುಂದೆ ಸರ್ಕಾರಿ ಹಾಗೂ ಖಾಸಗಿ ಬಸ್ ನಿಲುಗಡೆ ಇದೆ.

ಈ ಸ್ಥಳಗಳಲ್ಲಿ ಪುರಸಭೆಯಿಂದ ತಂಗುದಾಣ ನಿರ್ಮಿಸಿಲ್ಲ. ಕೂರಲು, ನಿಲ್ಲಲು ಸ್ಥಳಾವಕಾಶ ಇಲ್ಲ. ಬಸ್‌ಗಾಗಿ ಗಂಟೆಗಟ್ಟಲೆ ಕಾಯಬೇಕಾಗಿದೆ. ಈ ವೃತ್ತಗಳಲ್ಲಿ ತಂಗುದಾಣ ಇಲ್ಲದೇ, ಪ್ರಯಾಣಿಕರು ಬಿಸಿಲು, ಮಳೆಗೆ ಹೈರಾಣಾಗಿದ್ದಾರೆ.

ಟಿ.ಬಿ.ಕ್ರಾಸ್, ಚೇಳೂರು, ಪಾತಪಾಳ್ಯ, ಮಿಟ್ಟೇಮರಿ, ಚಿಂತಾಮಣಿ, ಗೂಳೂರು, ಬಿಳ್ಳೂರು, ಮಾರ್ಗಾನುಕುಂಟೆಗೆ ಸಂಚರಿಸಬೇಕಾದ ಪ್ರಯಾಣಿಕರು ಮುಖ್ಯರಸ್ತೆಯಲ್ಲಿ ತಂಗುದಾಣ ಇಲ್ಲದೇ ಸಂಕಷ್ಟ ಎದುರಿಸುವಂತೆ ಆಗಿದೆ.

ಮುಖ್ಯರಸ್ತೆಯಲ್ಲಿ ಶೌಚಾಲಯ, ತಂಗುದಾಣ ವ್ಯವಸ್ಥೆ ಮಾಡಿಲ್ಲ. ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದಲಿತ ಹಕ್ಕುಗಳ ಸಮಿತಿ ತಾಲ್ಲೂಕು ಕಾರ್ಯದರ್ಶಿ ಜಿ.ಕೃಷ್ಣಪ್ಪ ತಿಳಿಸಿದರು.

ಸಿವಿಲ್ ನ್ಯಾಯಾಲಯ, ಬಸ್ ನಿಲ್ದಾಣದ ಮುಂದೆ, ಗಂಗಮ್ಮ ಗುಡಿಯ ಖಾಸಗಿ ಬಸ್‌ ನಿಲ್ದಾಣದ ಪಕ್ಕ, ಉರ್ದು ಶಾಲೆ, ಬಾಲಕಿಯರ ಸರ್ಕಾರಿ ಶಾಲೆ, ಡಾ.ಎಚ್.ಎನ್.ವೃತ್ತ, ನ್ಯಾಷನಲ್ ಕಾಲೇಜಿನ ಮುಂದೆ ರಸ್ತೆಯ ಇಕ್ಕೆಲಗಳಲ್ಲಿ ತಂಗುದಾಣ ನಿರ್ಮಿಸಬೇಕು. ಕುರ್ಚಿಗಳ ವ್ಯವಸ್ಥೆ ಕಲ್ಪಿಸಲು ಮುಂದಿನ ಪುರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಪುರಸಭೆ ಸದಸ್ಯ ಎ.ನರಸಿಂಹಮೂರ್ತಿ ತಿಳಿಸಿದರು.

ಪಟ್ಟಣದ ಮುಖ್ಯರಸ್ತೆಯಲ್ಲಿ ತಂಗುದಾಣ ನಿರ್ಮಿಸಲು ಸ್ಥಳಾವಕಾಶ ಇಲ್ಲ. ಅಂಗಡಿ ನಿರ್ಮಾಣ ಮಾಡಿದ್ದಾರೆ. ಪುರಸಭೆಯ ಖಾಲಿ ನಿವೇಶನ ಇಲ್ಲ. ಕಡಿಮೆ ಜಾಗದಲ್ಲಿ ಆದರೂ ತಂಗುದಾಣ ನಿರ್ಮಿಸಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಪುರಸಭಾ ಮುಖ್ಯಾಧಿಕಾರಿ ಎಲ್.ಶಂಕರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT