ಚೇಳೂರು: ಸುದೀರ್ಘ ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನನ್ನು ಸರ್ಕಾರ ವಾಪಸ್ ಪಡೆದುಕೊಂಡಿದ್ದು, ರೈತರ ಹೋರಾಟಕ್ಕೆ ಫಲ ಸಿಕ್ಕಿದೆ ಎಂದು ಸಿಪಿಎಂ ಮುಖಂಡ ಮಾಸನಪಲ್ಲಿ ಬೈರಾರೆಡ್ಡಿ ಹೇಳಿದರು.
ಚೇಳೂರಿನ ಮಹಾತ್ಮಗಾಂಧಿ ವೃತ್ತದ ಬಳಿ ಸಂಭ್ರಮಾಚರಣೆ ನಡೆಸಿ ಮಾತನಾಡಿದರು.
ದೇಶದಾದ್ಯಂತ ರೈತರು ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಪ್ರತಿಭಟನೆ ಮಾಡುತ್ತಿದ್ದರೂ ಕೂಡ ನರೇಂದ್ರ ಮೋದಿ ಕನಿಷ್ಠ ಸೌಜನ್ಯಕ್ಕಾದರೂ ರೈತರ ಬಳಿ ಬರಲಿಲ್ಲ. ಆದರೆ ಏಕಾಏಕಿ ಕಾಯ್ದೆಗಳನ್ನು ವಾಪಸ್ ಪಡೆದುಕೊಂಡಿದ್ದಾರೆ. ಇದರ ಉದ್ದೇಶ ರೈತರ ಹೋರಾಟ ಗೆದ್ದಿದೆ ಎಂಬುದು ಸಾಬೀತಾಗಿದೆ. ಸರ್ಕಾರ ಜನ ವಿರೋಧಿ ಕಾನೂನುಗಳನ್ನ ಜಾರಿ ಮಾಡಿದರೆ ನಾವು ಕೈಕಟ್ಟಿ ಕೂರುವುದಿಲ್ಲ ಎಂದರು.
ಕೃಷಿ ಮಸೂದೆಯನ್ನು ಹಿಂಪಡೆಯುವಂತೆ ನಡೆಸಿದ ಪ್ರತಿಭಟನೆಯಲ್ಲಿ ಮೃತಪಟ್ಟ ರೈತರಿಗೆ ಕೇಂದ್ರ ಸರ್ಕಾರ ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಜಾಹೀರ್ ಬೇಗ್, ಮಂಜುನಾಥ, ನಲ್ಲಪರೆಡ್ಡಿ, ಬೈರಾರೆಡ್ಡಿ, ಫಾತಿಮಾ ಬಿ, ಅಂಗಡಿ ಭೈರಾರೆಡ್ಡಿ, ಸುನಿಲ್, ಸಂಜೀವರೆಡ್ಡಿ, ಭಾರತಿ ಇದ್ದರು.