ಗುಡಿಬಂಡೆ: ಇಲ್ಲಿನ ಡಿಸಿಸಿ ಬ್ಯಾಂಕ್ ಲೆಕ್ಕಾಧಿಕಾರಿ ಅನಿಲ್ ಕುಮಾರ್ ಎಂಬುವರು ಅಂದಾಜು ₹1.50 ಕೋಟಿಗೂ ಹೆಚ್ಚು ಹಣದೊಂದಿಗೆ ಪರಾರಿಯಾದ ಘಟನೆ ವಾರದ ಬಳಿಕ ಗೊತ್ತಾಗಿದೆ.
ಕೋಲಾರ– ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಶಂಕರ್ ಗುರುವಾರ ಗುಡಿಬಂಡೆ ಡಿಸಿಸಿ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ಲೆಕ್ಕಾಧಿಕಾರಿ ಅನಿಲ್ ಕುಮಾರ್ ಫೆ. 7ರಂದು ಹೋದವರು ಮತ್ತೆ ವಾಪಸ್ ಬಂದಿಲ್ಲ’ ಎಂದು ಬ್ಯಾಂಕ್ ವ್ಯವಸ್ಥಾಪಕ ಸುವರ್ಣಮೂರ್ತಿ ಫೆ. 13ರಂದು ಜಿಲ್ಲಾ ಬ್ಯಾಂಕ್ಗೆ ಮಾಹಿತಿ ನೀಡಿದ್ದಾರೆ.
‘ಗುಡಿಬಂಡೆಯ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಹಣ ದುರುಪಯೋಗವಾಗಿರುವುದು ನಿಜ. ಹಣ ದುರುಪಯೋಗ ಮಾಡಿದ ಸಿಬ್ಬಂದಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಲೆಕ್ಕ ಮುಗಿದ ನಂತರ ಹಣ ಎಷ್ಟು ದುರುಪಯೋಗವಾಗಿದೆ ಎಂದು ತಿಳಿಯಲಿದೆ. ಬ್ಯಾಂಕ್ ಖಾತೆದಾರರು ಹಾಗೂ ಹೂಡಿಕೆದಾರರು ಆತಂಕಪಡುವ ಅವಶ್ಯಕತೆ ಇಲ್ಲ’ ಎಂದು ಎಂ.ಡಿ ಶಂಕರ್ ಭರವಸೆ ನೀಡಿದರು.
ಗುಡಿಬಂಡೆ ಡಿಸಿಸಿ ಬ್ಯಾಂಕ್ ಶಾಖೆ ಬಳಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಬ್ಯಾಂಕ್ ಗ್ರಾಹಕರಿಗೆ ಹಣ ಮರಳಿಸಬೇಕು ಎಂದು ಒತ್ತಾಯಿಸಿ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಶುಕ್ರವಾರ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದರು. ‘ಡಿಸಿಸಿ ಬ್ಯಾಂಕ್ನಲ್ಲಿ ₹1 ಕೋಟಿಗೂ ಹೆಚ್ಚು ಹಣ ಕಾಣೆಯಾದ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಹಣ ದುರುಪಯೋಗ ಪಡಿಸಿಕೊಂಡಿರುವ ವ್ಯವಸ್ಥಾಪಕ ಮತ್ತು ಕ್ಯಾಷಿಯರ್ ಬಂಧಿಸಿ ಅವರಿಂದ ಹಣ ವಸೂಲು ಮಾಡಬೇಕು’ ಎಂದು ಅವರು ಒತ್ತಾಯಿಸಿದರು.