ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ: ಕುಂಟುತ್ತ ಸಾಗಿದೆ ಗುರುಭವನ ಕಾಮಗಾರಿ

Published 8 ಮಾರ್ಚ್ 2024, 6:45 IST
Last Updated 8 ಮಾರ್ಚ್ 2024, 6:45 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಶಿಕ್ಷಕರ ಬಹು ವರ್ಷಗಳ ಬೇಡಿಕೆಯಾದ ‘ಜಿಲ್ಲಾ ಗುರುಭವನ’ ಸದ್ಯಕ್ಕೆ ಪೂರ್ಣವಾಗುವ ಲಕ್ಷಣಗಳಿಲ್ಲ. ನಗರ ಹೊರವಲಯದ ಬಿಬಿ ರಸ್ತೆಯ ಜಡಲತಿಮ್ಮನಹಳ್ಳಿ ಕ್ರಾಸ್‌ ಬಳಿ ನಿರ್ಮಾಣವಾಗುತ್ತಿರುವ ಗುರುಭವನ ಕಾಮಗಾರಿ ಕುಂಟುತ್ತ ಸಾಗಿದೆ. ಚಿಕ್ಕಬಳ್ಳಾಪುರವು ಜಿಲ್ಲೆಯಾಗಿ ಒಂದೂವರೆ ದಶಕ ಕಳೆದರೂ ಗುರುಭವನವಿಲ್ಲ. 

2020ರ ಆಗಸ್ಟ್‌ 30ರಂದು ಜಿಲ್ಲಾ ಗುರುಭವನ ಶಂಕುಸ್ಥಾಪನಾ ಸಮಾರಂಭ ನಡೆಯಿತು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಶಂಕುಸ್ಥಾಪನೆ ನೆರವೇರಿಸಿದರು. 2021ರಲ್ಲಿ ಜಿಲ್ಲಾಡಳಿತ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಒಂದು ವರ್ಷದ ಒಳಗೆ ಗುರುಭವನ ಕಾಮಗಾರಿ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದರು. ಆದರೆ ನಾಲ್ಕು ವರ್ಷಗಳು ಕಳೆದರೂ ಭವನದ ಕಾಮಗಾರಿ ಮಾತ್ರ ಪೂರ್ಣವಾಗಿಲ್ಲ. 

ಇನ್ನೂ ನೆಲ ಮಹಡಿಯ ಕಾಮಗಾರಿ ಪೂರ್ಣವಾಗಿದೆ. ಮೊದಲ ಮಹಡಿ ನಿರ್ಮಾಣಕ್ಕೆ ಫಿಲ್ಲರ್‌ಗಳನ್ನು ಅಳವಡಿಸಲಾಗಿದೆ. ಪೂರ್ಣ ಕಾಮಗಾರಿ ಮುಗಿದು ಬಳಕೆಗೆ ಮುಕ್ತವಾಗುವುದು ಯಾವಾಗ ಎನ್ನುವ ಪ್ರಶ್ನೆ ಶಿಕ್ಷಕರದ್ದಾಗಿದೆ. 

₹ 5 ಕೋಟಿ ವೆಚ್ಚದಲ್ಲಿ ಗುರುಭವನ ನಿರ್ಮಾಣಕ್ಕೆ ಯೋಜಿಸಲಾಗಿತ್ತು. ಶಿಕ್ಷಣ ಇಲಾಖೆಯಿಂದ ₹ 1 ಕೋಟಿ, ಜಿಲ್ಲಾಡಳಿತದಿಂದ ₹ 2 ಕೋಟಿ ಮಂಜೂರಾಗಿದೆ. ಉಳಿದ ₹ 2 ಕೋಟಿಯನ್ನು ಶಾಸಕರು, ಸಂಸದರು ಸೇರಿದಂತೆ ವಿವಿಧ ಅನುದಾನಗಳ ಮೂಲಕ ಭರಿಸಲು ಯೋಜಿಸಲಾಗಿತ್ತು. ಹಣವನ್ನು ಯಾವ ಮೂಲಗಳಿಂದ ತರಬಹುದು ಎಂದು ಶಿಕ್ಷಕರ ಸಂಘದ ಪದಾಧಿಕಾರಿಗಳು ಸಹ ರೂಪುರೇಷೆಗಳನ್ನು ಸಿದ್ಧ ಮಾಡಿಕೊಂಡಿದ್ದರು. 

ಈಗಾಗಲೇ ನಡೆದಿರುವ ಗುರುಭವನ ಕಾಮಗಾರಿಗೆ ₹ 2 ಕೋಟಿ ಬಿಡುಗಡೆಯಾಗಿದೆ. ಶಿಕ್ಷಣ ಇಲಾಖೆಯಿಂದ ₹ 50 ಲಕ್ಷ ಮತ್ತು ಜಿಲ್ಲಾಡಳಿತದಿಂದ ₹ 50 ಲಕ್ಷ ಬಿಡುಗಡೆಗೆ ಬಾಕಿ ಇದೆ. ಇದರ ಜೊತೆಗೆ ಮತ್ತಷ್ಟು ಅನುದಾನವೂ ಕಾಮಗಾರಿ ಪೂರ್ಣಕ್ಕೆ ಅಗತ್ಯವಿದೆ. 2020ರಲ್ಲಿ ಇದ್ದ ಸಲಕರಣೆಗಳು, ಉತ್ಪನ್ನಗಳ ವೆಚ್ಚ ಮತ್ತು ಈಗಿನ ವೆಚ್ಚಕ್ಕೂ ವ್ಯತ್ಯಾವಿದೆ. ಈ ಕಾರಣದಿಂದ ಕಾಮಗಾರಿ ಪೂರ್ಣಕ್ಕೆ ಮತ್ತಷ್ಟು ಹೆಚ್ಚುವರಿ ಹಣದ ಅಗತ್ಯವೂ ಇದೆ. ಆರಂಭದಲ್ಲಿ ರೂಪಿಸಿರುವ ಡಿಪಿಆರ್‌ ಮೊತ್ತಕ್ಕೂ ಈಗಿನ ಕಾಮಗಾರಿಗೂ ಬಹಳಷ್ಟು ವ್ಯತ್ಯಾಸಗಳು ಆಗಲಿವೆ.

ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಗುರುಭವನದ ಕಟ್ಟಡವನ್ನು ಪರಿಶೀಲಿಸಿದ್ದರು. ವಿನ್ಯಾಸದ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದರು. ಮುಂದಿನ ದಿನಗಳಲ್ಲಿ ಕಾಮಗಾರಿಗೆ ಅನುದಾನ ದೊರಕಿಸಿಕೊಡುವ ಭರವಸೆ ನೀಡಿದ್ದರು. ಸಚಿವರ ಭೇಟಿಯ ನಂತರ ಶಿಕ್ಷಕರು ಮತ್ತು ಶಿಕ್ಷಕರ ಸಂಘಟನೆಗಳಲ್ಲಿ ಕಾಮಗಾರಿ ತ್ವರಿತವಾಗುತ್ತದೆಯೇ ಎನ್ನುವ ಆಶಾವಾದ ಗರಿಗೆದರಿದೆ.

ಜಿಲ್ಲಾ ಕೇಂದ್ರದಲ್ಲಿ ಶಿಕ್ಷಕರ ವಿವಿಧ ತರಬೇತಿಗಳು, ಕಾರ್ಯಾಗಾರ, ಸಭೆ, ಸಂವಾದಗಳು ಹಾಗೂ ಮಕ್ಕಳಿಗೆ ವಿವಿಧ ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಾಗಿರುತ್ತದೆ. ಈ ಎಲ್ಲ ಚಟುವಟಿಕೆಗಳನ್ನು ನಡೆಸಲು ಸೂಕ್ತ ಹಾಗೂ ಸಮರ್ಪಕ ಕಟ್ಟಡದ ಸೌಲಭ್ಯ ಸಹ ಇರಲಿಲ್ಲ. ಆದ್ದರಿಂದ ಜಿಲ್ಲೆಯಲ್ಲಿ ಗುರುಭವನ ನಿರ್ಮಿಸಲು ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಮುಂದಾಗಿತ್ತು. ಜಡಲತಿಮ್ಮನಹಳ್ಳಿ ಸರ್ವೆ ನಂ 31ರಲ್ಲಿ 20 ಗುಂಟೆ ಜಾಗವೂ ಮಂಜೂರಾಗಿತ್ತು.

ಹೀಗೆ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಗುರುಭವನ ನಿರ್ಮಾಣಕ್ಕೆ ಕ್ರಮವಹಿಸಲಾಗಿತ್ತು. ಕಾಮಗಾರಿಗೆ ಚಾಲನೆ ನೀಡಿದ ಸಮಯದಲ್ಲಿ ಆದಷ್ಟು ಬೇಗ ಕಟ್ಟಡವನ್ನು ಪೂರ್ಣಗೊಳಿಸುವ ಬಗ್ಗೆ ಜನಪ್ರತಿನಿಧಿಗಳು ಮಾತನಾಡಿದ್ದರು. ಈಗ ಸರ್ಕಾರ, ಶಾಸಕರು, ಸಚಿವರೂ ಬದಲಾವಣೆ ಆಗಿದ್ದಾರೆ. 

ಬಹು ವರ್ಷದ ಬೇಡಿಕೆ

‘ಪ್ರಸಕ್ತ ವರ್ಷದ ಶಿಕ್ಷಕರ ದಿನಾಚರಣೆ ವೇಳೆಗಾದರೂ ಭವನದ ಕಾಮಗಾರಿ ಪೂರ್ಣಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಮನಸ್ಸು ಮಾಡಬೇಕು. ಈ ಇಬ್ಬರಿಗೆ ಈ ವಿಚಾರದ ಬಗ್ಗೆ ತಿಳಿಸಲಾಗಿದೆ. ಅನುದಾನ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ’ ಎಂದು ಶಿಕ್ಷಣ ಇಲಾಖೆ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ಇದು ನಮ್ಮ ಬಹು ವರ್ಷಗಳ ಬೇಡಿಕೆ. ಆದರೆ ಈಡೇರುತ್ತಲೇ ಇಲ್ಲ. ಶಿಕ್ಷಕರಿಗೆ ಅನುಕೂಲವಾಗುವ ಭವನದ ಕಾಮಗಾರಿ ಪೂರ್ಣಕ್ಕೆ ಅಗತ್ಯವಿದ್ದಷ್ಟು ಅನುದಾನವನ್ನು ಜನಪ್ರತಿನಿಧಿಗಳು ದೊರಕಿಸಿಕೊಡಬೇಕು ಎಂದು ಮನವಿ ಮಾಡುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT