ಚಿಂತಾಮಣಿ: ತಾಲ್ಲೂಕಿನ ಮಾವಿನ ತೋಟವೊಂದರಲ್ಲಿ ಶುಕ್ರವಾರ ಬೆಳೆ ಕ್ಷೇತ್ರೋತ್ಸವ ನಡೆಯಿತು.
ಕೃಷಿ ವಿಜ್ಞಾನ ಕೇಂದ್ರದ ಡಾ.ಬಿ. ಸ್ವಾತಿ ಮಾತನಾಡಿ, ‘ಮಾವಿಗೆ ಕೀಟ ಮತ್ತು ರೋಗ ಭಾದೆ ಹೆಚ್ಚಾಗಿದ್ದು, ಸಮಗ್ರ ಬೆಳೆ ನಿರ್ವಹಣಾ ಪದ್ಧತಿ ಅಳವಡಿಸಿಕೊಂಡರೆ ಉತ್ಪಾದನಾ ವೆಚ್ಚ ಕಡಿಮೆ ಮಾಡಬಹುದು. ಉತ್ತಮ ಇಳುವರಿ ಪಡೆಯಬಹುದು’ ಎಂದರು.
ಮಾವಿನ ಸಮಗ್ರ ಬೆಳೆ ನಿರ್ವಹಣೆಯ ನೂತನ ತಂತ್ರಗಳಾದ ಚಾಟನಿ ಮಹತ್ವ, ಪ್ಲಾನೊಫಿಕ್ಸ್ ಬಳಕೆ, ಮಾವು ಸ್ಪೆಷಲ್ (ಲಘು ಪೋಷಕಾಂಶಗಳ ಮಿಶ್ರಣ) ಬಳಕೆ, ಬೂದಿ ರೋಗ, ಜಿಬ್ಬು ರೋಗ ಮತ್ತು ಜಿಗಿಹುಳು ನಿರ್ವಹಣೆಗೆ ಇರುವ ತಂತ್ರಗಳು, ಹಣ್ಣಿನ ನೊಣದ ನಿರ್ವಹಣೆಗೆ ಮೋಹಕ ಬಲೆಗಳ ಅಳವಡಿಕೆ ಬಗ್ಗೆ ಅರಿವು ಮೂಡಿಸಲಾಯಿತು.
ತೋಟಗಾರಿಕೆ ವಿಜ್ಞಾನಿ ಡಾ.ಆರ್.ಪ್ರವೀಣ್ ಮಾತನಾಡಿ, ‘ಮಾವಿನ ಕೊಯ್ಲು ಹಂಗಾಮು ಆರಂಭವಾಗಿದೆ. ಮಾವು ಕೊಯ್ಲು ಮಾಡುವ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡರೆ ಉತ್ತಮ ಗುಣಮಟ್ಟ ಕಾಪಾಡಿಕೊಳ್ಳಬಹುದು’ ಎಂದು ತಿಳಿಸಿದರು.
ಬೇಸಾಯ ಶಾಸ್ತ್ರದ ವಿಜ್ಞಾನಿಗಳಾದ ವಿಶ್ವನಾಥ್, ಜೈವಿಕ ಗೊಬ್ಬರಗಳ ಉಪಯೋಗ ಮತ್ತು ಮಾವಿನಲ್ಲಿ ಹಸಿರೆಲೆ ಗೊಬ್ಬರ ಗಿಡದ ಬಳಕೆಯಿಂದ ತೋಟದಲ್ಲಿ ಕಳೆ ನಿರ್ವಹಣೆ ಮತ್ತು ಮಣ್ಣಿನ ಪೌಷ್ಟಿಕತೆ ಹೆಚ್ಚಿಸಬಹುದು ಎಂದು ತಿಳಿಸಿದರು.
ಮಣ್ಣು ವಿಜ್ಞಾನಿ ಡಾ.ಕೆ. ಸಂಧ್ಯಾ ಮಣ್ಣಿನ ಮಹತ್ವ ಮತ್ತು ಪೋಷಕಾಂಶಗಳ ನಿರ್ವವಹಣೆ ಬಗ್ಗೆ ಮಾಹಿತಿ ನೀಡಿದರು. ಪ್ರಗತಿಪರ ರೈತರಾದ ಮನೋಹರ್, ಶ್ರೀನಿವಾಸರೆಡ್ಡಿ ನೂತನ ತಾಂತ್ರಿಕತೆಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. 30 ರೈತರು ಕಾರ್ಯಕ್ರಮದ ಸದುಪಯೋಗ ಪಡೆದರು.