ವರದಿ – ಸಿ.ಎಸ್. ವೆಂಕಟೇಶ್
ಚೇಳೂತರು: ಚಿಕ್ಕಬಳ್ಳಾಪುರ ಜಿಲ್ಲೆಯ ನೂತನ ತಾಲ್ಲೂಕು ಆಗಿರುವ ಚೇಳೂರು ವ್ಯಾಪ್ತಿಯ ಚಾಕವೇಲು ಗ್ರಾಮದಲ್ಲಿರುವ ಸರ್ಕಾರಿ ಶಾಲೆಯು ಹಲವಾರು ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.
ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಉತ್ತಮ ಶೌಚಾಲಯದ ವ್ಯವಸ್ಥೆಯಿಲ್ಲ. ಕಟ್ಟಡವನ್ನು ದುರಸ್ತಿಗೊಳಿಸಬೇಕಿದೆ. ಶಾಲಾ ತಡೆಗೋಡೆ ಪೂರ್ಣವಾಗಿ ಶಿಥಿಲಾವಸ್ಥೆಯಲ್ಲಿದ್ದು, ಅದನ್ನು ದುರಸ್ತಿಗೊಳಿಸಬೇಕಿದೆ. ಜತೆಗೆ ಶಾಲೆಯ ಮುಖ್ಯ ದ್ವಾರದ ಎದುರೇ ಚರಂಡಿ ನೀರು ಹರಿಯುತ್ತಿದ್ದು, ಶಾಲಾ ಕೊಠಡಿಗಳಲ್ಲಿ ದುರ್ನಾತ ಬೀರುತ್ತಿದೆ. ಇದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಕಿರಿಕಿರಿಯಾಗುತ್ತಿದೆ. ಅಲ್ಲದೆ, ಕುಡಿಯುವ ನೀರಿನ ಘಟಕವು ಕೆಟ್ಟಿರುವುದರಿಂದಾಗಿ ಕುಡಿಯುವ ನೀರು ಇಲ್ಲದಂತಾಗಿದೆ ಎಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಆರೋಪ.
ಸ್ವಾತಂತ್ರ್ಯ ಪೂರ್ವ 1917ರಲ್ಲಿ ಮೈಸೂರು ರಾಜ್ಯದ ಅವಧಿಯಲ್ಲಿ ಆರಂಭವಾಗಿರುವ ಚಾಕವೇಲು ಗ್ರಾಮದ ಸರ್ಕಾರಿ ಶಾಲೆಯು ಶತಮಾನ ಪೂರೈಸಿದೆ. ಈ ಶಾಲೆಯಲ್ಲಿ ಓದಿದ ಹಲವು ವಿದ್ಯಾರ್ಥಿಗಳು ಇಂದು ಎಂಜಿನಿಯರ್, ವೈದ್ಯ ಸೇರಿದಂತೆ ಇನ್ನಿತರ ಉನ್ನತವಾದ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಕೆಲವರು ವಿದೇಶಗಳಿಗೆ ಹೋಗಿದ್ದಾರೆ.
ಈ ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿವರೆಗೆ ಒಟ್ಟಾರೆ 265 ವಿದ್ಯಾರ್ಥಿಗಳು ಓದುತ್ತಿದ್ದು, ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮಗಳಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತಿದೆ. ಬಾಗೇಪಲ್ಲಿ ನಗರ ಹೊರತುಪಡಿಸಿ ಗ್ರಾಮೀಣ ಭಾಗದಲ್ಲಿ ಚೇಳೂರು ತಾಲ್ಲೂಕಿನಲ್ಲಿ ಅತಿಹೆಚ್ಚು ಮಕ್ಕಳು ಶಾಲೆಗೆ ದಾಖಲಾಗಿರುವ ಹೆಗ್ಗಳಿಕೆಗೆ ಈ ಶಾಲೆ ಪಾತ್ರವಾಗಿದೆ.
ವಿಶಾಲವಾದ ಮೈದಾನ: ವಿದ್ಯಾರ್ಥಿಗಳಿಗೆ ಆಟವಾಡಲು ಮೈದಾನ ಸೇರಿದಂತೆ ಇನ್ನಿತರ ಸೌಕರ್ಯಗಳನ್ನು ಕಲ್ಪಿಸಲಾಗಿದ್ದು, ಇದು ಶಾಲಾಭಿವೃದ್ಧಿಗೆ ಹಿಡಿದ ಕನ್ನಡಿಯಾಗಿದೆ. ವಿದ್ಯಾರ್ಥಿಗಳಿಗಾಗಿ ಸರ್ಕಾರ ಜಾರಿಗೊಳಿಸಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆ, ಕ್ಷೀರಭಾಗ್ಯ ಯೋಜನೆಗಳಂತಹ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. ಇದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ. ಶಾಲೆಯಲ್ಲಿ ಇಬ್ಬರು ಕೌಶಲಪೂರ್ಣ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳು ಗುಣಮಟ್ಟದ ಮತ್ತು ಮೌಲ್ಯಧಾರಿತ ಶಿಕ್ಷಣ ಪಡೆಯುತ್ತಿದ್ದಾರೆ.
ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿಯನ್ನು ಉತ್ತೇಜಿಸಲು ಕೊಠಡಿಗಳನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದ್ದು, ವಿಭಿನ್ನ ಬೋಧನಾ ಉಪಕರಣಗಳಿಂದ ಸಿಂಗರಿಸಲಾಗಿದೆ. ಪ್ರತಿ ವರ್ಷ ಗ್ರಾಮಸ್ಥರ ನೆರವಿನಿಂದ ಶಾಲಾ ವಾರ್ಷಿಕೋತ್ಸವ ಆಚರಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣವನ್ನೂ ನೀಡಲಾಗುತ್ತಿದೆ. ಈ ಮೂಲಕ ಮಕ್ಕಳಲ್ಲಿ ತಾಂತ್ರಿಕ ಜ್ಞಾನ ತುಂಬುವ ಕೆಲಸ ನಡೆಯುತ್ತಿದೆ.
ಕೇವಲ ಪಾಠಗಳಲ್ಲದೆ ಇತರೆ ರೀತಿಯ ಕೌಶಲ ತರಗತಿಗಳನ್ನು ನಡೆಸಲಾಗುತ್ತದೆ. ಉತ್ತಮ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ಇದೆ. ನಮಗೆ ಇಲ್ಲಿ ಓದಲು ತುಂಬಾ ಖುಷಿಕೀರ್ತನ ಏಳನೇ ತರಗತಿ ವಿದ್ಯಾರ್ಥಿನಿ
ಶಿಕ್ಷಕರು ವಿಶೇಷ ತರಗತಿಗಳಿಗೆ ಹೆಚ್ಚಿನ ಒತ್ತು ಕೊಡುತ್ತಾರೆ. ಪ್ರತಿನಿತ್ಯ ಗುಂಪು ರಚನೆ ಮೂಲಕ ಓದಲು ಅನುಕೂಲ ಕಲ್ಪಿಸುತ್ತಾರೆ. ಓದಲು ಉತ್ತಮ ವಾತಾವರಣವಿದೆಭವಿತ ಎಸ್.ಎ ಏಳನೇ ತರಗತಿ ವಿದ್ಯಾರ್ಥಿನಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.