ಬಾಗೇಪಲ್ಲಿ: ಕೋವಿಡ್-19 ಸೋಂಕಿನ ಅವಧಿಯಲ್ಲಿ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ದಲಿತ ಮುಖಂಡರು ಗ್ರೇಡ್ 2 ತಹಶೀಲ್ದಾರ್ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.
ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಅಧ್ಯಕ್ಷ ಬೂರಗಮಡುಗು ನರಸಿಂಹಪ್ಪ ಮಾತನಾಡಿ, ಕೊರೊನಾ ಸಂಕಷ್ಟ ಸಮಯದಲ್ಲಿ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಜಾತಿ ದೌರ್ಜನ್ಯವನ್ನು ದಲಿತ ಹಕ್ಕುಗಳ ಸಮಿತಿ ಖಂಡಿಸುತ್ತದೆ ಎಂದರು.
ತಾಲ್ಲೂಕು, ಜಿಲ್ಲೆ ಹಾಗೂ ವಿವಿಧ ರಾಜ್ಯಗಳಲ್ಲಿ ದಲಿತರ ಮೇಲೆ ದೌರ್ಜನ್ಯ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೆ ಒಳಗಾದ ದಲಿತರು, ಕೃಷಿ ಕೂಲಿ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿದರು.
ದಲಿತ ಹಕ್ಕುಗಳ ಸಮಿತಿ ಮುಖಂಡರಾದ ಚನ್ನರಾಯಪ್ಪ, ಮುತ್ತು, ಎನ್.ವಿ.ಕೃಷ್ಣಪ್ಪ, ವೆಂಕಟೇಶ್, ಗೌರಿಬಿದನೂರಿನ ಸಂಚಾಲಕ ಲಕ್ಷ್ಮೀನಾರಾಯಣ, ಆಂಜಿನಪ್ಪ, ಜಿ.ಕೃಷ್ಣಪ್ಪ, ಶಂಕರನಾಯಕ್, ರವಣಪ್ಪ ಉಪಸ್ಥಿತರಿದ್ದರು.