ಗೌರಿಬಿದನೂರು: ಮಹಾರಾಷ್ಟ್ರದ ಮುಂಬೈನಿಂದ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ 120 ಜನರು ಬಂದಿದ್ದು ತಾಲ್ಲೂಕಿನಲ್ಲಿ ಆತಂಕ ಹೆಚ್ಚಿಸಿದೆ.
ಸೋಮವಾರ ಲಾರಿ ಮತ್ತು ಟೆಂಪೊ ಮೂಲಕ 9 ಕಾರ್ಮಿಕರು ನೆರೆಯ ಆಂಧ್ರದ ಮೂಲಕ ತಾಲ್ಲೂಕಿಗೆ ಬಂದಿದ್ದರು. ಮಂಗಳವಾರ 4 ಸಾರಿಗೆ ಬಸ್ ಮೂಲಕ ಸುಮಾರು 120 ಮಂದಿ ಕಾರ್ಮಿಕರು ಮಧುಗಿರಿ ಮಾರ್ಗವಾಗಿ ಹಾಗೂ ಉಳಿದಂತೆ ಖಾಸಗಿ ವಾಹನಗಳ ಮೂಲಕ ಮುಂಬೈನಿಂದ ತಾಲ್ಲೂಕಿಗೆ ಬಂದಿದ್ದಾರೆ.
ತಾಲ್ಲೂಕಿನ ಗಡಿಭಾಗದ ಚೆಕ್ಪೋಸ್ಟ್ಗಳಲ್ಲಿ ಪೊಲೀಸ್ ಮತ್ತು ಆರೋಗ್ಯ ಅಧಿಕಾರಿಗಳು ಪ್ರಾಥಮಿಕ ಚಿಕಿತ್ಸೆಗೆ ಒಳಪಡಿಸಿದ್ದಾರೆ. ಬಳಿಕ ನಗರದ ಹೊರವಲಯದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ ಎಲ್ಲರನ್ನು ಕ್ವಾರೆಂಟೈನ್ ಮಾಡಲಾಗಿದೆ.
ಆರೋಗ್ಯ ಇಲಾಖೆಯ ಅಧಿಕಾರಿ ಮುಂಬೈನಿಂದ ಬಂದ ಎಲ್ಲರ ದಾಖಲೆ ಸಂಗ್ರಹಿಸಿದ ಬಳಿಕ ರಕ್ತ ಹಾಗೂ ಗಂಟಲಿನ ದ್ರವ ಪಡೆದು ಪರೀಕ್ಷೆಗೆ ಕಳುಹಿಸಿದ್ದಾರೆ. ಕ್ವಾರೆಂಟೈನ್ನಲ್ಲಿರುವ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಸಮಾಜ ಕಲ್ಯಾಣ ಇಲಾಖೆಯಿಂದ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.