ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ ಗ್ರಾಮೀಣ ಪ್ರದೇಶಗಳಲ್ಲಿ 10ಕ್ಕೂ ಅಧಿಕ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಪ್ರಸ್ತುತ ಸೋಂಕು ಸಮುದಾಯದಲ್ಲಿ ಹರಡಿರುವ ಆತಂಕ ವ್ಯಕ್ತಪಡಿಸುತ್ತಿರುವ ಹಳ್ಳಿಯ ಜನರು ಭೀತಿಗೆ ಒಳಗಾಗಿದ್ದಾರೆ.
ಗೌರಿಬಿದನೂರು ತಾಲ್ಲೂಕಿನ ಆರು ಹಳ್ಳಿಗಳಲ್ಲಿ ಸೋಮವಾರ 10 ಮಂದಿ, ಚಿಂತಾಮಣಿ ತಾಲ್ಲೂಕಿನ ಉಪ್ಪಾರಪೇಟೆಯ ಮಹಿಳೆಯೊಬ್ಬರಿಗೆ ಮತ್ತು ಚಿಕ್ಕಬಳ್ಳಾಪುರದ ನಾಲ್ಕು ಜನರು ಸೇರಿದಂತೆ ಒಟ್ಟು 15 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 201ಕ್ಕೆ ಏರಿಕೆಯಾಗಿದೆ.
ಗೌರಿಬಿದನೂರು ತಾಲ್ಲೂಕಿನ ಡಿಪಾಳ್ಯಕ್ಕೆ ಮಹಾರಾಷ್ಟ್ರದಿಂದ ವಾಪಾಸಾದ 28 ವರ್ಷದ ವ್ಯಕ್ತಿ, 21 ವರ್ಷದ ಗೃಹಿಣಿಯಲ್ಲಿ ಕೋವಿಡ್ ಪತ್ತೆಯಾಗಿದೆ. ಜತೆಗೆ, ಕಡಬೂರಿನ 65 ವರ್ಷದ ಪುರುಷ, 60 ವರ್ಷದ ಮಹಿಳೆ, ಹಾಲಗಾನಹಳ್ಳಿಯ 65 ವರ್ಷದ ಪುರುಷ, ಅಲ್ಲಿಪುರದ 20 ವರ್ಷದ ಯುವಕನೊಬ್ಬನಲ್ಲಿ ಕೋವಿಡ್ ಕಾಣಿಸಿಕೊಂಡಿದೆ.
ಸೊನಗಾನಹಳ್ಳಿಯ ಒಬ್ಬರು, ಚಿಕ್ಕಹೊಸಹಳ್ಳಿಯ ಮೂರು ಜನರಲ್ಲಿ ಸೋಂಕು ಕಾಣಿಸಿಕೊಂಡಿರುವುದು ಸ್ಥಳೀಯ ಜನರಲ್ಲಿ ಭೀತಿ ಹುಟ್ಟಿಸಿದೆ.
ಕೋವಿಡ್ ಪೀಡಿತರ ವಾಸಸ್ಥಳಪ್ರದೇಶಗಳನ್ನು ಸೀಲ್ ಡೌನ್ ಮಾಡಿರುವ ಆರೋಗ್ಯ ಇಲಾಖೆ ಸಿಬ್ಬಂದಿ, ವೈರಸ್ ನಾಶಕ ದ್ರಾವಣದಿಂದ ಶುಚಿಗೊಳಿಸುವುದು, ಸೋಂಕಿತರ ಸಂಪರ್ಕಕ್ಕೆ ಬಂದವರ ಮಾಹಿತಿ ಕಲೆ ಹಾಕುವ ಕೆಲಸದಲ್ಲಿ ತೊಡಗಿದ್ದಾರೆ.
ಸೋಂಕಿತರ ಪೈಕಿ ಇಬ್ಬರು ಕೋವಿಡ್ನಿಂದ, ಇಬ್ಬರು ವಿವಿಧ ಕಾಯಿಲೆಗಳಿಂದ ಮೃತಪಟ್ಟಿದ್ಧಾರೆ. ಚಿಕಿತ್ಸೆಯಿಂದ 162 ಸೋಂಕಿತರು ಗುಣಮುಖರಾಗಿದ್ದಾರೆ. ಸದ್ಯ ಕೋವಿಡ್ ವಾರ್ಡ್ನಲ್ಲಿ 35 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.