ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ | ಬೆಳೆ ಸಮೀಕ್ಷೆ; ಶೇ 97ರಷ್ಟು ಪೂರ್ಣ

ಮೂರು ದಿನಗಳಲ್ಲಿ ಉಳಿದ ತಾಕುಗಳ ಸಮೀಕ್ಷೆ ಪೂರ್ಣ: ಕೃಷಿ ಇಲಾಖೆ
Published 14 ಮೇ 2024, 6:07 IST
Last Updated 14 ಮೇ 2024, 6:07 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೃಷಿ ಇಲಾಖೆಯು ಬೇಸಿಗೆ ಬೆಳೆ ಸಮೀಕ್ಷೆ ನಡೆಸಿದೆ. ಇಲ್ಲಿಯವರೆಗೆ ಶೇ 97.31ರಷ್ಟು ಬೆಳೆ ಸಮೀಕ್ಷೆ ಪೂರ್ಣವಾಗಿದೆ. ಉಳಿದ ತಾಕುಗಳ ಬೆಳೆ ಸಮೀಕ್ಷೆಯು ಮೂರು ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ಬೇಸಿಗೆ ಬೆಳೆ ಸಮೀಕ್ಷೆಯು ಈಗಾಗಲೇ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಚುನಾವಣೆಯ ಕಾರಣದಿಂದ ಕಾರ್ಯವು ಸ್ವಲ್ಪ ಮಟ್ಟಿಗೆ ತಡವಾಗಿದೆ. ಪ್ರತಿ ಬಾರಿಯೂ ಬೆಳೆ ಸಮೀಕ್ಷೆಯ ವಿಚಾರವಾಗಿ ಚಿಕ್ಕಬಳ್ಳಾಪುರವು ರಾಜ್ಯದಲ್ಲಿ ಅಗ್ರಪಟ್ಟಿಯ ಜಿಲ್ಲೆಗಳಲ್ಲಿ ಸ್ಥಾನ ಪಡೆಯುತ್ತದೆ. ಈ ಬಾರಿಯೂ ಉತ್ತಮವಾಗಿ ಬೆಳೆ ಸಮೀಕ್ಷೆ ನಡೆಸಿದ ಜಿಲ್ಲೆಗಳ ಸಾಲಿನಲ್ಲಿ ಇದೆ. 

ಬೆಳೆ ಸಮೀಕ್ಷೆಯ ದತ್ತಾಂಶವು ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗಳ ವಿಸ್ತೀರ್ಣ ಲೆಕ್ಕ ಹಾಕುವ ಜೊತೆಗೆ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ಫಲಾನುಭವಿಗಳ ಪಟ್ಟಿ ತಯಾರಿಸಲು, ವಿಮಾ ಯೋಜನೆ, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಫಲಾನುಭವಿಗಳನ್ನು ಗುರುತಿಸಲು, ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆ ಅನುಷ್ಠಾನಕ್ಕೆ ಹಾಗೂ ಪಹಣಿಗಳಲ್ಲಿ ಬೆಳೆ ವಿವರ ದಾಖಲಿಸಲು ಸಹಾಯವಾಗುತ್ತದೆ. 

ರೈತರು ತಮ್ಮ ಜಮೀನಿನಲ್ಲಿರುವ ಬೆಳೆಗಳ ವಿವರವನ್ನು ದಾಖಲಿಸಬೇಕು. ಇಲ್ಲದಿದ್ದರೆ ಸರ್ಕಾರದ ಯೋಜನೆಗಳಿಂದ ವಂಚಿತರಾಗುವ ಸಾಧ್ಯತೆಯೂ ಇರುತ್ತದೆ. ಬೇಸಿಗೆ ಮತ್ತು ಮುಂಗಾರು ಅವಧಿಯಲ್ಲಿ ಕೃಷಿ ಇಲಾಖೆಯು ಬೆಳೆ ಸಮೀಕ್ಷೆ ನಡೆಸುತ್ತದೆ.

ಜಿಲ್ಲೆಯಲ್ಲಿ ಬೇಸಿಗೆ ಅವಧಿಯಲ್ಲಿ ಒಟ್ಟು 5,05,057 ಕೃಷಿ ತಾಕುಗಳನ್ನು ಸಮೀಕ್ಷೆಗೆ ಗುರುತಿಸಲಾಗಿತ್ತು. ಇವುಗಳಲ್ಲಿ 4,91,507 ತಾಕುಗಳ ಸಮೀಕ್ಷೆ ಪೂರ್ಣವಾಗಿದೆ.  13,550 ತಾಕುಗಳ ಸಮೀಕ್ಷೆ ಬಾಕಿ ಇವೆ. 

619 ಖಾಸಗಿ ವ್ಯಕ್ತಿಗಳ ಬಳಕೆ: ‍ಕೃಷಿ ಇಲಾಖೆಯು ಕಂದಾಯ ಇಲಾಖೆ ಸಹಕಾರದಲ್ಲಿ ಬೆಳೆ ಸಮೀಕ್ಷೆ ನಡೆಸುತ್ತದೆ. ಜಿಲ್ಲೆಯಲ್ಲಿ ಒಟ್ಟು 619 ಮಂದಿ ಖಾಸಗಿ ವ್ಯಕ್ತಿಗಳು ಈ ಬಾರಿಯ ಬೆಳೆ ಸಮೀಕ್ಷೆಯಲ್ಲಿ ತೊಡಗಿಸಲಾಗಿದೆ. ಗ್ರಾಮ ಸೇವಕರು ಸೇರಿದಂತೆ ಗ್ರಾಮ ಮಟ್ಟದ ಖಾಸಗಿ ವ್ಯಕ್ತಿಗಳು ಈ ಸಮೀಕ್ಷೆ ನಡೆಸುವರು. 

ಬಾಗೇಪಲ್ಲಿ ತಾಲ್ಲೂಕಿನಲ್ಲಿ 107, ಗುಡಿಬಂಡೆ 36, ಚಿಂತಾಮಣಿ 143, ಶಿಡ್ಲಘಟ್ಟ 122, ಗೌರಿಬಿದನೂರು 110 ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 101 ಮಂದಿ ಖಾಸಗಿ ವ್ಯಕ್ತಿಗಳು ಬೆಳೆ ಸಮೀಕ್ಷೆ ನಡೆಸಿದ್ದಾರೆ. ಒಂದು ತಾಕಿನ ಸಮೀಕ್ಷೆಗೆ ₹ 10 ನೀಡಲಾಗುತ್ತದೆ. ಒಬ್ಬ ವ್ಯಕ್ತಿ ತನ್ನ ಗ್ರಾಮವೂ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಗರಿಷ್ಠ 1,500 ತಾಕುಗಳವರೆಗೆ ಬೆಳೆ ಸಮೀಕ್ಷೆ ನಡೆಸಬಹುದು. ಒಂದು ವೇಳೆ ಒಂದು ತಾಕಿನಲ್ಲಿ ನಾನಾ ಬೆಳೆಗಳು ಇದ್ದರೆ ಗರಿಷ್ಠ ₹ 20ರವರೆಗೆ ಹಣ ನೀಡಲಾಗುತ್ತದೆ.

ಬಾಗೇಪಲ್ಲಿ ತಾಲ್ಲೂಕಿನಲ್ಲಿ ಗರಿಷ್ಠ ಪ್ರಮಾಣದಲ್ಲಿ ಬೆಳೆ ಸಮೀಕ್ಷೆ ನಡೆದಿದ್ದರೆ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಕಡಿಮೆ ಪ್ರಮಾಣದಲ್ಲಿ ಬೆಳೆ ಸಮೀಕ್ಷೆ ಆಗಿದೆ. 

ಅಪ್‌ಲೋಡ್‌ ಮಾಡಲು ರೈತರ ನಿರಾಸಕ್ತಿ  

ಖಾಸಗಿ ವ್ಯಕ್ತಿಗಳಲ್ಲದೆ ರೈತರು ಸ್ವತಃ ತಾವೇ ಮೊಬೈಲ್ ಆ್ಯಪ್‌ ಮೂಲಕ ತಮ್ಮ ಜಮೀನಿನಲ್ಲಿರುವ ಬೆಳೆಯನ್ನು ದಾಖಲಿಸಬಹುದು. ಆದರೆ ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆಯ ಅವಕಾಶವನ್ನು ಬಳಸಿಕೊಳ್ಳಲು ರೈತರು ನಿರಾಸಕ್ತಿ ತೋರಿಸಿದ್ದಾರೆ.  ಬೆಳೆ ಸಮೀಕ್ಷೆ ಕಾರ್ಯಕ್ರಮದಡಿ ತಾವು ಬೆಳೆದ ಬೆಳೆಯನ್ನು ದಾಖಲಿಸಲು ರೈತರಿಗಾಗಿಯೇ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗಿದೆ. ರೈತರು ತಮ್ಮ ಜಮೀನಿನ ಸರ್ವೆ ನಂಬರ್ ಹಿಸ್ಸಾ ನಂಬರ್‌ವಾರು ಬೆಳೆದ ಕೃಷಿ ಬೆಳೆ ಹಾಗೂ ಬಹುವಾರ್ಷಿಕ ತೋಟಗಾರಿಕೆ ಅರಣ್ಯ ಇತರೆ ಬೆಳೆ ಮಾಹಿತಿಯನ್ನು ಫೋಟೊ ಸಹಿತ ಅಂಡ್ರ್ಯಾಯಿಡ್ ಮೊಬೈಲ್ ಮೂಲಕ ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಿಂಕ್ ಬಳಸಿ ಬೇಸಿಗೆ ಬೆಳೆ ಸಮೀಕ್ಷೆ ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡು ದಾಖಲಿಸಬಹುದು.  ಹೀಗೆ ಸ್ವತಃ ರೈತರೇ ಮಾಹಿತಿ ದಾಖಲಿಸಲು ಅವಕಾಶವಿದ್ದರೂ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಮಾಹಿತಿ ದಾಖಲಿಸಿರುವ ರೈತರ ಸಂಖ್ಯೆ 4 ಮಾತ್ರ. ಗುಡಿಬಂಡೆ ತಾಲ್ಲೂಕಿನಲ್ಲಿ ಒಂದು ಮತ್ತು ಚಿಂತಾಮಣಿ ತಾಲ್ಲೂಕಿನಲ್ಲಿ ಮೂರು ತಾಕುಗಳ ಬೆಳೆ ಸಮೀಕ್ಷೆಯನ್ನು ಸ್ವತಃ ರೈತರೇ ಮಾಡಿದ್ದಾರೆ.

‘ಸಮೀಕ್ಷೆಗೆ ಖಾಸಗಿ ವ್ಯಕ್ತಿಗಳ ಬರ’

ಒಂದು ತಾಕಿನ ಸಮೀಕ್ಷೆ ನಡೆಸಲು ₹ 10 ನೀಡಲಾಗುತ್ತಿದೆ. ಕೆಲಸಕ್ಕೂ ಸಮಯ ತೆಗೆದುಕೊಳ್ಳುತ್ತದೆ. ಕಡಿಮೆ ಹಣ ನೀಡಲಾಗುತ್ತದೆ ಎಂದು ಸಮೀಕ್ಷೆ ನಡೆಸಲು ಖಾಸಗಿ ವ್ಯಕ್ತಿಗಳು ಮುಂದೆ ಬರುತ್ತಿಲ್ಲ ಎಂದು ಕೃಷಿ ಇಲಾಖೆ ಸಿಬ್ಬಂದಿ ತಿಳಿಸುವರು.  ಸಮೀಕ್ಷೆಯ ಗೌರವಧನ ಹೆಚ್ಚಿಸುವಂತೆ ಮೇಲಧಿಕಾರಿಗಳಿಗೆ ಪತ್ರ ಸಹ ಬರೆಯಲಾಗಿದೆ. ಈ ವೇಳೆಗಾಗಲೇ ಸಮೀಕ್ಷೆಯ ಪ್ರಕ್ರಿಯೆಗಳು ಪೂರ್ಣವಾಗಬೇಕಾಗಿತ್ತು. ಆದರೆ ಚುನಾವಣೆಯ ಕಾರಣ ತಡವಾಗಿದೆ. ರಾಜ್ಯದಲ್ಲಿ ಬೆಳೆ ಸಮೀಕ್ಷೆಯಲ್ಲಿ ಜಿಲ್ಲೆಯು ಪ್ರತಿ ವರ್ಷ ಉತ್ತಮ ಸಾಧನೆಯನ್ನೇ ಮಾಡುತ್ತಿದೆ ಎಂದರು. ರೈತರೇ ತಮ್ಮ ಬೆಳೆ ಸಮೀಕ್ಷೆ ಮಾಡಿಕೊಳ್ಳಬಹುದು. ಈ ಬಗ್ಗೆ ಇಲಾಖೆಯು ಸಹ ವ್ಯಾಪಕವಾಗಿ ಪ್ರಚಾರ ಕೈಗೊಂಡಿದೆ. ಹೀಗಿದ್ದರೂ ಜಿಲ್ಲೆಯಲ್ಲಿ ಸ್ವಯಂ ಬೆಳೆ ಸಮೀಕ್ಷೆಗೆ ರೈತರು ಆಸಕ್ತಿ ತೋರುತ್ತಿಲ್ಲ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT