ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳಿ ಮಣ್ಣಿಗೆ: ತೋಟದಲ್ಲಿ ಖರ್ಜೂರದ ಘಮ

ಗೌರಿಬಿದನೂರು ತಾಲ್ಲೂಕಿನ ಸಾಗಾನಹಳ್ಳಿ ಗೇಟ್ ಬಳಿ ತೋಟ
Last Updated 8 ಆಗಸ್ಟ್ 2022, 4:05 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ:ಮರಗಳ ಮೈ ತುಂಬಿದ ಬಲೆಗಳು. ಫಸಲನ್ನು ಮುಚ್ಚಿರುವ ಬಿಳಿ ಹೊದಿಕೆಗಳು...ಗೌರಿಬಿದನೂರಿನಿಂದ ನಾಮಗೊಂಡ್ಲು ಗ್ರಾಮಕ್ಕೆ ತೆರಳುವ ದಾರಿಯಲ್ಲಿ ಸಿಗುವ ಸಾಗಾನಹಳ್ಳಿ ಗೇಟ್ ಬಳಿ ತೋಟವೊಂದು ಹೊಸ ದಾರಿಹೋಕರಲ್ಲಿ ಅಚ್ಚರಿ ಮೂಡಿಸುತ್ತದೆ. ಕ್ಷಣ ಹೊತ್ತು ನಿಂತು ಆ ತೋಟದ ಬಗ್ಗೆ ತಿಳಿದು ಮುನ್ನಡೆಯುವರು.

ಆ ಅಚ್ಚರಿಗೆ ಕಾರಣವಾಗುವುದು ಖರ್ಜೂರದ ತೋಟ. ಖರ್ಜೂರ ಮರಳುಗಾಡಿನ ಬೆಳೆ. ಇಂತಹ ಖರ್ಜೂರವನ್ನು ಬಯಲು ಸೀಮೆಯ ಗೌರಿಬಿದನೂರು ತಾಲ್ಲೂಕಿನಲ್ಲಿ ಬೆಳೆಯಲಾಗಿದೆ. ಈಗ ಈ ತೋಟದ ತುಂಬಾ ಖರ್ಜೂರದ ಫಸಲು ನಳನಳಿಸುತ್ತಿವೆ. ಗೌರಿಬಿದನೂರಿನ ವಿವಿಧ ಭಾಗಗಳು ಹಾಗೂ ಬೆಂಗಳೂರಿನ ಖರ್ಜೂರ ಪ್ರಿಯರು ಇಲ್ಲಿಗೆ ಹಣ್ಣು ಅರಸಿ ಬರುತ್ತಿದ್ದಾರೆ.

ಅಂದಹಾಗೆ ಇದು ಬೆಂಗಳೂರಿನ ನಿವಾಸಿ ದಿವಾಕರ್ ಅವರ ತೋಟ.ಸಾಗಾನಹಳ್ಳಿ ಬಳಿ ದಿವಾಕರ್ ಅವರಿಗೆ ನಾಲ್ಕೂವರೆ ಎಕರೆ ಪಿತ್ರಾರ್ಜಿತ ಆಸ್ತಿ ಇದೆ. ಇದರಲ್ಲಿ ಎರಡು ಎಕರೆಯಲ್ಲಿ ಖರ್ಜೂರದ ತೋಟ ಮಾಡಿದ್ದಾರೆ.

ಖರ್ಜೂರದ ಜತೆಗೆಹಲಸು, ನೇರಳೆ, ಸೀಬೆ, ಸೀತಾಫಲ, ರಾಮಫಲ, ಕಬ್ಬು ಸೇರಿದಂತೆ ನಾನಾ ಹಣ್ಣುಗಳು ಮತ್ತು ಬೆಳೆಗಳು ತೋಟದಲ್ಲಿವೆ. ಇಡೀ ತೋಟವನ್ನು ಸಾವಯವ ಕೃಷಿಗೆ ಒಗ್ಗಿಸಿರುವ ಅವರು, ತೋಟಕ್ಕೆ ‘ಮರಳಿ ಮಣ್ಣಿಗೆ’ ಎಂದು ಹೆಸರಿಟ್ಟಿದ್ದಾರೆ. ಈ ‘ಮರಳಿ ಮಣ್ಣಿಗೆ’ ತೋಟವನ್ನು ಹೊಕ್ಕರೆ ಖರ್ಜೂರ ಸೇರಿದಂತೆ ನಾನಾ ಹಣ್ಣುಗಳ ಘಮ ಅಡರುತ್ತದೆ.

‘ಮರಳಿ ಮಣ್ಣಿಗೆ’ ತೋಟದಲ್ಲಿ ಹತ್ತಾರು ಬೆಳೆಗಳಿದ್ದರೂ ಗಮನ ಸೆಳೆಯುತ್ತಿರುವುದು ಮತ್ತು ದಿವಾಕರ್ ಅವರ ತೋಟ ಗುರುತಾಗಿರುವುದು ‘ಬರ್ಹಿ’ ತಳಿಯ ಖರ್ಜೂರದ ಕಾರಣದಿಂದ. 14 ವರ್ಷಗಳ ಹಿಂದೆ ದಿವಾಕರ್ ಈ ತೋಟದಲ್ಲಿ ಖರ್ಜೂರ ನಾಟಿ ಮಾಡಿದ್ದರು. ಈಗ 98 ಮರಗಳು ಫಸಲು ನೀಡುತ್ತಿವೆ. ಗೊನೆಗಳಲ್ಲಿ ತೊನೆದಾಡುವ ‘ಬರ್ಹಿ’ ತಳಿಯ ಖರ್ಜೂರವನ್ನು ನೋಡುವುದೇ ಕಣ್ಣಿಗೆ ಆನಂದ.

ತೋಟದ ನಿರ್ವಹಣೆಗೆ ಕೆಲಸಗಾರರು ಇದ್ದಾರೆ. ಮರಗಳಿಂದ ಉದುರುವ ಹಣ್ಣನ್ನು ಹೆಕ್ಕುವುದು, ನಿರ್ವಹಣೆಯಿಂದ ಹಿಡಿದು ತೋಟಕ್ಕೆ ಬಂದ ಗ್ರಾಹಕರಿಗೆ ತಲುಪಿಸುವುದು ಇವರ ಕೆಲಸ. ಇಲ್ಲಿನಖರ್ಜೂರಕ್ಕೆ ಬ್ರಾಂಡ್ ರೂಪುಕೊಡುವ ಪ್ರಯತ್ನಗಳು ಸಹ ನಡೆದಿವೆ. ‘ಮರಳಿ ಮಣ್ಣಿಗೆ’ ಹೆಸರಿನ ಬ್ಯಾಗ್‌ಗಳಲ್ಲಿ ಗ್ರಾಹಕರ ಮನೆಯನ್ನು ಹಣ್ಣು ಸೇರುತ್ತಿದೆ. ಗ್ರಾಹಕರ ಹೆಸರು, ವಿಳಾಸ ಮತ್ತು ಮೊಬೈಲ್ ನಂಬರ್‌ಗಳನ್ನು ದಾಖಲಿಸಿಕೊಳ್ಳಲಾಗುತ್ತದೆ.

ಹೀಗೆ ನೇರವಾಗಿ ಗ್ರಾಹಕರಿಗೆ ಹಣ್ಣುಗಳ ಮಾರಾಟ ಒಂದು ಬಗೆಯದಾದರೆ, ಖರ್ಜೂರವನ್ನು ಸೋಲಾರ್ ಟ್ರೇನಲ್ಲಿ ಬೇರೆ ಬೇರೆ ಹಂತಗಳಲ್ಲಿ ಒಣಗಿಸಿ ಮಾರಾಟ ಮಾಡುವ ಪ್ರಯೋಗಾತ್ಮಕ ವಿಧಾನಗಳೂ ‘ಮರಳಿ ಮಣ್ಣಿಗೆ’ ತೋಟದಲ್ಲಿ ಕಾಣಬಹುದು.

ಪ್ರತಿ ವರ್ಷದ ಜುಲೈ ಮತ್ತು ಆಗಸ್ಟ್ ವೇಳೆಗೆ ಖರ್ಜೂರ ಕಟಾವಿಗೆ ಬರುತ್ತದೆ. ಈ ವೇಳೆ ಮರಳಿ ಮಣ್ಣಿಗೆ ತೋಟದಲ್ಲಿ ಕೊಯ್ಲು ಹಬ್ಬ ಆಚರಿಸಲಾಗುತ್ತದೆ. ಗ್ರಾಹಕರೇ ನೇರವಾಗಿ ತೋಟಕ್ಕೆ ಬಂದು ಹಣ್ಣನ್ನು ತಿಂದು ಈ ಹಣ್ಣು ಬೇಕು ಎಂದು ಹೇಳಿ ಕಟಾವು ಮಾಡಿಸಿಕೊಂಡು ಕೊಂಡೊಯ್ಯಬಹುದು.

‘ಪ್ರತಿ ವರ್ಷ ಹಣ್ಣು ಕಟಾವಿನ ಸಂದರ್ಭದಲ್ಲಿ ತೋಟದಲ್ಲಿಯೇ ಕೊಯ್ಲು ಹಬ್ಬ ಆಚರಿಸುತ್ತಿದ್ದೇವೆ. ಆರೇಳು ವರ್ಷಗಳಿಂದ ಹಬ್ಬ ಮಾಡುತ್ತಿದ್ದೇವೆ. ಹಬ್ಬದಲ್ಲಿ ತೋಟದಲ್ಲಿಯೇ ಊಟದ ವ್ಯವಸ್ಥೆ ಇರುತ್ತದೆ. ಮೊದಲ ಹಬ್ಬದಲ್ಲಿ 100ರಿಂದ 120 ಕುಟುಂಬಗಳು ಬಂದಿದ್ದವು. ಅವರಲ್ಲಿ ಶೇ 50 ಮಂದಿ ಇಂದಿಗೂ ನಮ್ಮ ಗ್ರಾಹಕರಾಗಿದ್ದಾರೆ’ ಎನ್ನುತ್ತಾರೆ ದಿವಾಕರ್.

ಕೊಯ್ಲು ಹಬ್ಬದ ಮೂಲಕ ಗ್ರಾಹಕರನ್ನು ಖರ್ಜೂರದ ತೋಟಕ್ಕೆ ಕರೆದುಕೊಂಡು ಬರಲಾಗುತ್ತದೆ. ಗ್ರಾಹಕರು ತೃಪ್ತಿಯಾಗುವಷ್ಟು ಹಣ್ಣನ್ನು ತಿಂದು, ಮತ್ತಷ್ಟು ಖರೀದಿಸುವರು. ಗ್ರಾಹಕರು ಬೇಡಿಕೆ ಸಲ್ಲಿಸಿದರೆ ನೇರವಾಗಿ ಮನೆಗೂ ಹಣ್ಣು ತಲುಪಿಸುತ್ತೇವೆ ಎಂದು ಹೇಳಿದರು.

2008ರಲ್ಲಿ ಗಿಡಗಳ ನಾಟಿ

‘2008ರಲ್ಲಿ ನಾವು 120 ಖರ್ಜೂರದ ಸಸಿಗಳನ್ನು ನಾಟಿ ಮಾಡಿದ್ದೆವು. ಅದರಲ್ಲಿ 98 ಫಸಲು ನೀಡುತ್ತಿವೆ. ಈ ಬಾರಿಯದ್ದು 8ನೇ ವರ್ಷದ ಫಸಲು. ವರ್ಷಕ್ಕೆ ಒಂದು ಮರ ಸರಾಸರಿ 40ರಿಂದ 50 ಕೆ.ಜಿ ಫಸಲು ನೀಡುತ್ತದೆ. ವಾರ್ಷಿಕ ನಾಲ್ಕರಿಂದ ಐದು ಟನ್ ಹಣ್ಣು ದೊರೆಯುತ್ತದೆ’ ಎಂದು ಮಾಹಿತಿ ನೀಡುವರು ದಿವಾಕರ್.

‘ಜುಲೈ, ಆಗಸ್ಟ್‌ನಲ್ಲಿ ಗೌರಿಬಿದನೂರಿನಲ್ಲಿ ಖರ್ಜೂರ ಸಿಗುತ್ತದೆ ಎನ್ನುವುದು ಬೆಂಗಳೂರು ಸೇರಿದಂತೆ ಬಹಳಷ್ಟು ಕಡೆಯ ಜನರಿಗೆ ತಿಳಿದಿದೆ. ಮರಗಳಿಗೆ ಯಾವುದೇ ರಾಸಾಯನಿಕವನ್ನು ನೀಡುವುದಿಲ್ಲ. ಜೀವಾಮೃತ, ಕೊಟ್ಟಿಗೆ ಗೊಬ್ಬರ ಸೇರಿದಂತೆ ಸಾವಯವ ಪದ್ಧತಿಯಡಿ ಹಣ್ಣನ್ನು ಪಡೆಯುತ್ತಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT