ಶಿಡ್ಲಘಟ್ಟ: ‘ದೇವೇಗೌಡರು ಯಾಕೆ ಇಷ್ಟು ಕೀಳುಮಟ್ಟಕ್ಕೆ, ಕೆಳಮಟ್ಟಕ್ಕೆ ಇಳಿದುಬಿಟ್ಟಿದ್ದಾರೆ? ದೇವೇಗೌಡರೇ ನಿಮ್ಮ ಜಾತ್ಯತೀತತೆ ಏನಾಯಿತು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ನಗರದಲ್ಲಿ ಭಾನುವಾರ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಪರ ರೋಡ್ ಷೋ ನಡೆಸಿ ಮಾತನಾಡಿದರು.
ಚಿಕ್ಕಬಳ್ಳಾಪುರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ದೇವೇಗೌಡರು ಪೈಪೋಟಿಗೆ ಬಿದ್ದು ಸುಳ್ಳುಗಳನ್ನು ಹೇಳಿದ್ದಾರೆ. ಕರ್ನಾಟಕಕ್ಕೆ ಖಾಲಿ ಚೊಂಬು ನೀಡಿರುವ ಕೇಂದ್ರ ಸರ್ಕಾರ ಅಕ್ಷಯಪಾತ್ರೆ ನೀಡಿದೆ ಎಂದು ಸುಳ್ಳು ಹೇಳಿದ್ದಾರೆ ಎಂದು ಕಿಡಿಕಾರಿದರು.
ಕೇವಲ ಕುಟುಂಬದ ಸ್ವಾರ್ಥಕ್ಕಾಗಿ ಕೋಮುವಾದಿಗಳೊಂದಿಗೆ ಕೈಜೋಡಿಸಿಬಿಟ್ಟಿರಾ? ನಿಮಗೆ ನಾಚಿಕೆ ಆಗಬೇಕು. ಜೆಡಿಎಸ್ನವರಿಗೆ ಕಾಂಗ್ರೆಸ್ ಬಗ್ಗೆ ಹೆದರಿಕೆ ಹುಟ್ಟಿದೆ. ಅದಕ್ಕಾಗಿ ಬಿಜೆಪಿ ಜೊತೆ ಸಖ್ಯ ಬೆಳೆಸಿದ್ದಾರೆ ಎಂದು ಟೀಕಿಸಿದರು.
ದೇವೇಗೌಡರು ಮಗ, ಅಳಿಯ, ಮೊಮ್ಮಗನಿಗೆ ಟಿಕೆಟ್ ಕೊಡಿಸಿ ಕುಟುಂಬಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆ. ಇನ್ನೊಂದು ಅವಕಾಶ ಇದಿದ್ದರೆ ಇನ್ನೊಬ್ಬ ಮೊಮ್ಮಗನಿಗೂ ಸ್ಥಾನ ಕೊಡಿಸುತ್ತಿದ್ದರೇನೋ ಎಂದು ವ್ಯಂಗ್ಯವಾಡಿದರು.
ಪ್ರಧಾನಿಯಾಗಲು ನರೇಂದ್ರ ಮೋದಿ ನಾಲಾಯಕ್ಕು ಎಂದರು.