ಶಿಡ್ಲಘಟ್ಟ: ಜುಲೈ 21ರಂದು ಬೆಳಗಾವಿ ಜಿಲ್ಲೆಯ ಯರಗುತ್ತಿ ತಾಲ್ಲೂಕಿನಲ್ಲಿ ರೈತ ಹುತಾತ್ಮ ದಿನಾಚರಣೆ ನಡೆಯಲಿದ್ದು, ಅದರಲ್ಲಿ ಭಾಗಿಯಾಗಿ ರೈತರ ಸಮಸ್ಯೆ ಚರ್ಚಿಸುತ್ತೇವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.
ನಗರದ ರೈತ ಸಂಘ ಕಚೇರಿಯಲ್ಲಿ ರೈತ ಹುತಾತ್ಮರ ದಿನಾಚರಣೆಯಲ್ಲಿ ಭಾಗಿಯಾಗಲು ಕಾರ್ಯಕರ್ತರೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಸಮೀಪಿಸುತ್ತಿದೆ. ಅದರಲ್ಲಿ ಸ್ಪರ್ಧಿಸುವಂತೆ ರಾಜ್ಯ ಸಮಿತಿ ಆದೇಶಿಸಿದ್ದು, ಈ ಬಗ್ಗೆ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ತಾಲ್ಲೂಕಿನಲ್ಲಿ ಮುಂಗಾರು ಮಳೆ ಶುರುವಾಗಿದೆ. ರೈತರು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾದ ಸಮಯವಿದು. ನಮ್ಮ ಕಾರ್ಯಕರ್ತರಾದ ರೈತರಿಗೆ ತೊಂದರೆಯಾಗದಂತೆ ಅವರಿಗೆ ಅಗತ್ಯ ಪರಿಕರಗಳು ಬೇಸಾಯದ ಸಮಯಕ್ಕೆ ಸರಿಯಾಗಿ ಸಿಗುವ ರೀತಿಯಲ್ಲಿ ವ್ಯವಸ್ಥೆ ಮಾಡಬೇಕಾಗಿದೆ ಎಂದರು.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಅಗತ್ಯ ಪದಾರ್ಥಗಳ ಏರಿಕೆಯಾಗಿ ರೈತರ ಪರಿಕರಗಳು, ಬೆಳೆದ ಉತ್ಪನ್ನಗಳಾದ ಹೂವು, ತರಕಾರಿ, ಹಣ್ಣುಗಳ ಸಾಗಾಣಿಕೆ ವೆಚ್ಚ, ಭೂಮಿ ಉಳುವ ಟ್ರ್ಯಾಕ್ಟರ್ ವೆಚ್ಚ ಹೊರೆಯಾಗುತ್ತಿದೆ. ಜುಲೈ 21ರಂದು ನಡೆಯಲಿರುವ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗುವುದು ಎಂದು ನುಡಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಜಿಲ್ಲಾ ಉಪಾಧ್ಯಕ್ಷ ಮುನಿನಂಜಪ್ಪ, ನಗರ ಘಟಕದ ಅಧ್ಯಕ್ಷ ಬಿ. ನಾರಾಯಣಸ್ವಾಮಿ, ತಮ್ಮಣ್ಣ, ಕೆಂಪಣ್ಣ, ಬಸವರಾಜ್, ಕೃಷ್ಣಪ್ಪ, ರಮೇಶ್ ಹಾಜರಿದ್ದರು.