ಬಾಗೇಪಲ್ಲಿ: ತಾಲ್ಲೂಕಿನಲ್ಲಿ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಪ್ರಮಾಣ ಹೆಚ್ಚಿರುವುದರಿಂದ ಯುವಕರು ಸೇರಿದಂತೆ ಮಹಿಳೆಯರು, ವೃದ್ಧರಿಗೆ ಹೆಚ್ಚಾಗಿ ರಕ್ತಹೀನತೆ ಸಮಸ್ಯೆ ಕಾಡುತ್ತಿದೆ. ಹಾಗಾಗಿ, ಜನರು ಪೌಷ್ಟಿಕ ಆಹಾರ ಹಾಗೂ ಶುದ್ಧ ನೀರು ಸೇವಿಸಬೇಕು ಎಂದು ಪೀಪಲ್ಸ್ ಶಸ್ತ್ರಚಿಕಿತ್ಸಾ ಮತ್ತು ಪ್ರಸೂತಿ ಆಸ್ಪತ್ರೆಯ ವೈದ್ಯ ಡಾ.ಅನಿಲ್ ಕುಮಾರ್ ಸಲಹೆ ನೀಡಿದರು.
ಪಟ್ಟಣದ ಪೀಪಲ್ಸ್ ಆಸ್ಪತ್ರೆಯಲ್ಲಿ ಶನಿವಾರ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ, ಯಂಗ್ ಲೈವ್ಸ್ ಫೌಂಡೇಷನ್ ಹಾಗೂ ರೈಟು ಟು ಲಿವ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಯಂಗ್ ಲೈವ್ಸ್ ಫೌಂಡೇಷನ್ ನಿರ್ದೇಶಕ ಮಾಡಪ್ಪಲ್ಲಿ ನರಸಿಂಹಮೂರ್ತಿ ಮಾತನಾಡಿ, ತಾಲ್ಲೂಕು ಅತಿ ಹಿಂದುಳಿದ ಪ್ರದೇಶವಾಗಿದೆ. ಜನರು ಅನೇಕ ರೋಗಗಳಿಂದ ಬಳಲುತ್ತಿದ್ದಾರೆ. ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಿಂದ ಉಚಿತವಾಗಿ ಹೃದಯ, ನರರೋಗ ಹಾಗೂ ಮೂತ್ರಪಿಂಡದ ಕಲ್ಲು, ಕ್ಯಾನ್ಸರ್ ರೋಗದ ಬಗ್ಗೆ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಪ್ತಗಿರಿ ಆಸ್ಪತ್ರೆಯ ವೈದ್ಯ ಡಾ.ವೇಣುಪ್ರಸಾದ್, ಡಾ.ಬಾಲಕೃಷ್ಣ, ಆಂಟೋನಿ, ಪರಮೇಶ್, ರಘು, ಪೀಪಲ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ.ಮಂಜುಳಾ ಪ್ರಸಾದ್, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಪಾಧ್ಯಕ್ಷ ಎಂ.ಪಿ. ಮುನಿವೆಂಕಟಪ್ಪ ಇದ್ದರು.