ಶಿಡ್ಲಘಟ್ಟ: ಗೌರಿ–ಗಣೇಶ ಹಬ್ಬಕ್ಕೆ ಇನ್ನೂ 20 ದಿನ ಬಾಕಿ ಇರುವಂತೆಯೇ ನಗರದಲ್ಲಿರುವ ಮಾರುಕಟ್ಟೆಗೆ ಬೃಹತ್ ಆಕಾರದ ಗಣೇಶ ಮೂರ್ತಿಗಳ ಆಗಮನವಾಗಿದೆ.
ಸುಮಾರು 22 ವರ್ಷಗಳಿಂದ ಗಣೇಶ ಮೂರ್ತಿ ವ್ಯಾಪಾರ ಮಾಡುತ್ತಿರುವ ಮೂರ್ತಿ ದೊಡ್ಡ ಟೆಂಪೊ ಮೂಲಕ ಮೂರು ಅಡಿ ಹಾಗೂ ಅದಕ್ಕಿಂತ ಎತ್ತರದ ಗಣೇಶ ಮೂರ್ತಿಗಳನ್ನು ತಂದಿಳಿಸಿದ್ದಾರೆ. ಪ್ರತಿಯೊಂದು ಗಣಪನ ಮೂರ್ತಿಯೂ ವಿಭಿನ್ನ ಮತ್ತು ಸುಂದರವಾಗಿವೆ. ನಗರದ ಕೋಟೆ ವೃತ್ತದ ಬಳಿಯ ರಾಮ ದೇವಾಲಯದ ಪ್ರಾಂಗಣದಲ್ಲಿ ಗಣಪನ ಮೂರ್ತಿಗಳನ್ನು ತಂದು ಜೋಡಿಸಿಟ್ಟಿದ್ದಾರೆ.
ಈ ಬಾರಿ ಮಳೆ ಇಲ್ಲದೆ ಜನರು ಕಷ್ಟದಲ್ಲಿದ್ದಾರೆ. ಕೆರೆ ಕುಂಟೆಗಳಲ್ಲಿ ನೀರಿಲ್ಲ. ಆದರೂ ಯುವಕರು, ಸಂಘ ಸಂಸ್ಥೆಗಳಲ್ಲಿ ಗಣೇಶ ಉತ್ಸಾಹವೇನೂ ಕುಗ್ಗಿಲ್ಲ. ಈಚೆಗೆ ನಡೆದ ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲೇ ಬೆಲೆ ಏರಿಕೆ ನಡುವೆಯೂ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ ನಡೆದಿತ್ತು. ಹಾಗಾಗಿ ವ್ಯಾಪಾರಿಗಳಲ್ಲಿ ನಿರೀಕ್ಷೆ ಹೆಚ್ಚಿದೆ.
‘ಸುಮಾರು ಎರಡು ದಶಕಗಳಿಂದ ನಾನು ಗಣೇಶನ ಹಬ್ಬದ ವೇಳೆ ಗಣೇಶ ಹಾಗೂ ಗೌರಿ ಮೂರ್ತಿಗಳನ್ನು ತಂದು ಮಾರಾಟ ಮಾಡುತ್ತೇನೆ. ಇದುವರೆಗೂ ನಾನು ಕೈಸುಟ್ಟುಕೊಂಡಿಲ್ಲ. ಈ ಬಾರಿ ಕೇವಲ ಮಣ್ಣಿನಲ್ಲಿ ತಯಾರಿಸಿರುವ ಗಣೇಶನ ಮೂರ್ತಿಗಳನ್ನಷ್ಟೇ ತರಿಸುತ್ತಿದ್ದೇನೆ. ಕೆಲವು ಮುಕ್ಕಾಗಿ ನಷ್ಟವಾಗುತ್ತದೆ. ಐದು ಸಾವಿರದಿಂದ ಹದಿನೈದು ಸಾವಿರ ರೂಪಾಯಿವರೆಗಿನ ಮೂರ್ತಿಗಳನ್ನು ಈಗ ತರಿಸಿದ್ದು, ಹಬ್ಬ ಹತ್ತಿರವಾದಂತೆ ಚಿಕ್ಕಚಿಕ್ಕ ಮೂರ್ತಿ ತರಿಸುತ್ತೇನೆ’ ಎನ್ನುತ್ತಾರೆ ವ್ಯಾಪಾರಿ ಮೂರ್ತಿ.
ಚಂದಾ ವಸೂಲಿ: ಗಣೇಶ ಮೂರ್ತಿಯ ಪ್ರತಿಷ್ಠಾಪನೆಗೆ ಎಳೆಯರು, ಮಕ್ಕಳು ಚಂದಾ ವಸೂಲಿ ಪ್ರಾರಂಭಿಸಿದ್ದಾರೆ.
ಪಿಒಪಿ ನಿರ್ಬಂಧ: ಪರಿಸರ ಸ್ನೇಹಿಯಾದ ಮಣ್ಣಿನ ಗಣೇಶ ಮೂರ್ತಿಗಳನ್ನು ಮಾತ್ರ ಬಳಸಬೇಕಿರುವುದರಿಂದ ಮಣ್ಣಿನ ಮೂರ್ತಿಗಳಷ್ಟೇ ನಗರಕ್ಕೆ ಆಗಮಿಸಿವೆ. ಹಿಂದೆ ಪಿಒಪಿ ಮೂರ್ತಿಗಳು ಹೆಚ್ಚಾಗಿ ಮಾರಾಟ ಮಾಡಲಾಗುತ್ತಿತ್ತು. ಅವು ನೋಡಲು ಆಕರ್ಷಕವಾಗಿರುತ್ತಿದ್ದವು. ಆದರೆ ಪರಿಸರಕ್ಕೆ ಹಾನಿಕಾರಕವಾಗಿರುವುದರಿಂದ ನಿರ್ಬಂಧಿಸಲಾಗಿದೆ. ಈಗ ಕೇವಲ ಮಣ್ಣಿನ ಮೂರ್ತಿಗಳನ್ನಷ್ಟೇ ಮಾರಾಟ ಮಾಡಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.