ಚಿಕ್ಕಬಳ್ಳಾಪುರ ನಗರದಿಂದ ಕೇತೇನಹಳ್ಳಿ ಮಾರ್ಗದಲ್ಲಿ ಕೇವಲ 12 ಕಿ.ಮೀ ದೂರದಲ್ಲಿದೆ ಈ ಜಲಪಾತ. ಸುತ್ತಲಿನ ಅರಣ್ಯಕ್ಕೆ ಅಂಟಿಕೊಂಡಿರುವ ಪಂಚಗಿರಿಗಳಾದ ಆವಲಬೆಟ್ಟ, ಭೀಮೇಶ್ವರಬೆಟ್ಟ, ನರಸಿಂಹಸ್ವಾಮಿಬೆಟ್ಟ, ಕೌರವನಬೆಟ್ಟ ಹಾಗೂ ದೇವರಬೆಟ್ಟದ ಮೇಲೆ ಮಳೆ ನೀರು ಬಿದ್ದು ಹಳ್ಳಕೊಳ್ಳಗಳು ತುಂಬಿ ಹರಿದು ಇಲ್ಲಿ ಜಲಧಾರೆ ಧುಮ್ಮಿಕ್ಕುತ್ತಿದೆ. ಈ ಸೊಬಗು ಸವಿಯುತ್ತಿರುವ ಸ್ಥಳೀಯರು ಅದರಲ್ಲೂ ಯುವಕ, ಯುವತಿಯರು ಜಲಪಾತದೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಾ, ನೀರಿನಲ್ಲಿ ಆಡುತ್ತಾ ಆನಂದಿಸುತ್ತಿದ್ದಾರೆ.