ಚಿಕ್ಕಬಳ್ಳಾಪುರ: ಜಿಲ್ಲೆಯ ಅಂತರ್ಜಲ ವೃದ್ಧಿಗಾಗಿ ರೂಪಿಸಿರುವ ಹೆಬ್ಬಾಳ -ನಾಗವಾರ ಸಂಸ್ಕರಿತ ತ್ಯಾಜ್ಯ ನೀರು ಯೋಜನೆಯ ಕಾಮಗಾರಿ ಪೂರ್ಣಗೊಂಡಿದ್ದು, ಗುರುವಾರ ಬೆಂಗಳೂರಿನ ಬಾಗಲೂರು ಕೆರೆಯಿಂದ ಚಿಕ್ಕಬಳ್ಳಾಪುರದ ಕಂದವಾರ ಕೆರೆಗೆ ನೀರು ಹರಿಸಲಾಗಿದೆ.
ಈ ಯೋಜನೆ ಸುಮಾರು ₹ 883 ಕೋಟಿ ವೆಚ್ಚ ಆಗಿದ್ದು, ಒಟ್ಟು 114 ಕಿ.ಮೀ ಉದ್ದದ ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡು ಕಂದವಾರ ಕೆರೆಗೆ ನೀರು ಹರಿಸಲಾಗಿದೆ. ವಾರ್ಷಿಕ 2.70 ಟಿಎಂಸಿ ನೀರು ಹರಿಸುವ ಗುರಿ ಹೊಂದಲಾಗಿದೆ.
ಎತ್ತಿನ ಹೊಳೆ ಯೋಜನೆ ವಿಳಂಬ ಆಗಲಿದೆ ಎಂದು ಹೇಳಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯಲ್ಲಿ ಎಚ್.ಎನ್ ವ್ಯಾಲಿ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಿದ್ದರು. ಇದೀಗ ಕಂದವಾರ ಕೆರೆಗೆ ನೀರು ಹರಿದು ಬಂದಿದ್ದು. ಇಲ್ಲಿಂದ ಜಿಲ್ಲೆಯ ಒಟ್ಟು 44 ಕೆರೆಗಳಿಗೆ ನೀರು ಹರಿಸಲಾಗುವುದು. ಕೆರೆಗೆ ನೀರು ಹರಿಯುತ್ತಿರುವುದನ್ನು ಕಂಡು ಸ್ಥಳೀಯರು ಸಂತಸ ವ್ಯಕ್ತಪಡಿಸಿದರು.