ಚಿಕ್ಕಬಳ್ಳಾಪುರ: ಕೊರೊನಾ ಸೋಂಕು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಮದ್ಯ ಮಾರಾಟ ನಿಷೇಧಿಸಿದರೂ ಕದ್ದುಮುಚ್ಚಿ ಮಾರಾಟ ಮಾಡುತ್ತಿರುವವರ ಪತ್ತೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ಮಾರ್ಚ್ 21 ರಿಂದ ಏಪ್ರಿಲ್ 7ರ ವರೆಗೆ ಜಿಲ್ಲೆಯಲ್ಲಿ 428 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ.
ದಾಳಿಯಲ್ಲಿ ಅಧಿಕಾರಿಗಳು 1,518 ಲೀಟರ್ ಮದ್ಯ, 357 ಲೀಟರ್ ಬೀಯರ್, 47 ಲೀಟರ್ ಸೇಂದಿ, 1,500 ಲೀಟರ್ ಕಳ್ಳಭಟ್ಟಿ ಸಾರಾಯಿ, ಎರಡು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿ, ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 10 ಪ್ರಕರಣಗಳನ್ನು ದಾಖಲಿಸಲಾಗಿದೆ.
ಗೌರಿಬಿದನೂರು ತಾಲ್ಲೂಕಿನ ನಾಮಗೊಂಡ್ಲು ಗ್ರಾಮದಲ್ಲಿರುವ ನಾಗಜ್ಯೋತಿ ವೈನ್ಸ್ ಮಳಿಗೆಗೆ ಹಾಕಿದ್ದ ಮೊಹರು ಮಾಡಿರುವ ಸೀಲ್ ಅನ್ನು ತೆಗೆದು ಮದ್ಯವನ್ನು ಮಾರಾಟ ಮಾಡಿದ್ದು, ಪತ್ತೆಯಾದ ಕಾರಣ ಜಿಲ್ಲಾಧಿಕಾರಿಗಳು, ಆ ಮಳಿಗೆಯ ಪರವಾನಗಿ ರದ್ದು ಮಾಡಿ ಆದ್ದೇಶಿಸಿದ್ದಾರೆ.