ಚಿಕ್ಕಬಳ್ಳಾಪುರ: ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲುಗೊಳಿಸಿ ಮೆರವಣಿಗೆ ನಡೆಸಿದ್ದು ಮತ್ತು ಅವರ ಮೇಲೆ ದೌರ್ಜನ್ಯ ಎಸಗಿದ್ದನ್ನು ಖಂಡಿಸಿ ನಗರದಲ್ಲಿ ಶುಕ್ರವಾರ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ನಗರದ ಶಿಡ್ಲಘಟ್ಟ ವೃತ್ತದಲ್ಲಿ ಸೇರಿದ ಸಂಘಟನೆಗಳ ಸದಸ್ಯರು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು. ಇಡೀ ದೇಶವೇ ಈ ದುರ್ಘಟನೆಯಿಂದ ತಲೆ ತಗ್ಗಿಸುವಂತೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಖಂಡರಾದ ಬಿ.ಕಿರಣ್ ನಾಯಕ್ ಮಾತನಾಡಿ, ‘ಈ ದುರ್ಘಟನೆ ನಡೆದು 20ಕ್ಕೂ ಹೆಚ್ಚು ದಿನ ಆಗಿದೆ. ಹೆಣ್ಣು ಮಕ್ಕಳ ಮೇಲೆ ನಡೆದ ಈ ಭೀಭತ್ಯ ಕೃತ್ಯದಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಆಗಿದೆ. ರಾಷ್ಟ್ರಪತಿ ಸಹ ಹೆಣ್ಣಾಗಿದ್ದು ಅವರು ಈ ಬಗ್ಗೆ ಒಂದೂ ಮಾತನಾಡಿಲ್ಲ. ಇದು ಬೇಸರ ತರಿಸಿದೆ ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರವು ಈ ದುಷ್ಟ ಕೃತ್ಯಕ್ಕೆ ಕಾರಣರಾದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಇಂತಹ ಘಟನೆಗಳು ದೇಶದ ಯಾವ ಭಾಗದಲ್ಲಿಯೂ ಮುಂದೆ ನಡೆಯಬಾರದು ಎಂದರು.
ಮುಖಂಡರಾದ ಸುಷ್ಮಾ ಶ್ರೀನಿವಾಸ್, ಮುರಳೀಧರ್, ಸೌಭಾಗ್ಯಮ್ಮ, ಕೆ.ಸಿ.ಮಮತಾ, ಸುಬ್ರಮಣ್ಯಂ, ಕೃಷ್ಣಪ್ಪ, ಅಮೃತ, ಡಿ.ಭವ್ಯ, ಕಾವ್ಯ, ಭಾಗ್ಯ, ವಿಜಯಲಕ್ಷ್ಮಿ, ಇಬ್ರಾಹಿಂ, ವೆಂಕಟರೆಡ್ಡಿ,
ಗೌಸ್ ಪಾಷ, ಸಮೀರ್, ಮೌಲ, ಸಂತೋಷ್, ರೇಷ್ಮಾ, ಐಶ್ವರ್ಯ, ಮಂಜುನಾಥ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.