ಚಿಕ್ಕಬಳ್ಳಾಪುರ: ಚಿಂತಾಮಣಿ ನಗರದ ಕನಂಪಲ್ಲಿಯ ನಿವಾಸಿ ಡಾ.ಎನ್.ವಿವೇಕ್ ರೆಡ್ಡಿ ಅವರು 2019ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ (ಯುಪಿಎಸ್ಸಿ) 485ನೇ ರ್ಯಾಂಕ್ ಪಡೆದು, ಮೂರನೇ ಪ್ರಯತ್ನದಲ್ಲಿ ತಮ್ಮ ಕನಸು ಈಡೇರಿಸಿಕೊಂಡಿದ್ದಾರೆ.
ವೈದ್ಯಕೀಯ ಶಿಕ್ಷಣ ಪದವೀಧರರಾಗಿರುವ ವಿವೇಕ್ ರೆಡ್ಡಿ ಅವರು ಶಿಕ್ಷಕರಾಗಿರುವ ತಂದೆಯೇ ತಮ್ಮ ಐಎಎಸ್ ಕನಸಿಗೆ ನೀರೇರೆದವರು ಎಂದು ಸ್ಮರಿಸಿಕೊಂಡರು.
ಐಎಎಸ್ ತರಬೇತಿಗಾಗಿ ದೆಹಲಿಗೆ ಹೋಗಿ ಅಲ್ಲಿಯ ವಾತಾವರಣಕ್ಕೆ ಒಗ್ಗಿಕೊಳ್ಳಲಾಗದೆ 8 ತಿಂಗಳಿಗೆ ವಾಪಾಸಾಗಿ ಬೆಂಗಳೂರಿನಲ್ಲೇ ಓದಿ, ಪರೀಕ್ಷೆ ಎದುರಿಸಿ ಯಶಸ್ಸು ಪಡೆದವರು ವಿವೇಕ್.
ಈ ಹಿಂದೆ ಮಂಡ್ಯ ವೈದ್ಯಕೀಯ ಶಿಕ್ಷಣ ಕಾಲೇಜಿನಲ್ಲಿ ಕೆಲಸ ಮಾಡಿರುವ ಇವರು, ಕಳೆದ 10 ತಿಂಗಳಿಂದ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಕಿರಿಯ ನಿವಾಸಿ ವೈಧ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.
‘ಯಾವುದೇ ಪರೀಕ್ಷೆ ಕಠಿಣವಲ್ಲ. ತಾಳ್ಮೆ ಇಟ್ಟುಕೊಂಡು ಸತತ ಪ್ರಯತ್ನಪಟ್ಟರೆ ಖಂಡಿತ ಯಶಸ್ಸು ದೊರೆಯುತ್ತದೆ’ ಎನ್ನುವುದು ವಿವೇಕ್ ಅವರ ಅನುಭವದ ಮಾತು.