ಬಾಗೇಪಲ್ಲಿ: ‘ಕೇಂದ್ರ ಸರ್ಕಾರದ ನರೇಂದ್ರ ಮೋದಿ ಆಡಳಿತದಲ್ಲಿ ಶ್ರೀಮಂತರ ಆಸ್ತಿ ದುಪ್ಪಟ್ಟು ಆಗಿದೆ. ಆದರೆ ಜನಸಾಮಾನ್ಯರು ಬಳಸುವ ಪೆಟ್ರೋಲ್, ಡೀಸೆಲ್,ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಿಲ್ಲ’ ಎಂದು ಮಾಜಿ ಶಾಸಕ ಹಾಗೂ ಪ್ರಜಾ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಜಿ.ವಿ.ಶ್ರೀರಾಮರೆಡ್ಡಿ ಆರೋಪಿಸಿದರು.
ತಾಲ್ಲೂಕು ಕಚೇರಿ ಮುಂದೆ ಮಂಗಳವಾರ ಪ್ರಜಾ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಪೆಟ್ರೋಲ್, ಡೀಸೆಲ್,ಅಡುಗೆ ಅನಿಲ ದರ ಏರಿಕೆ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
‘ಬೆಲೆಗಳು ಏರಿಕೆ ಮಾಡಿರುವುದರಿಂದ ಸಾರಿಗೆ ದರ ಹೆಚ್ಚಾಗುತ್ತವೆ. ಇದರಿಂದ ರೈತರು ಬೆಳೆದ ಬೆಳೆಗಳನ್ನು ಸಾಗಿಸಲು ಆಗುವುದಿಲ್ಲ. ದೇಶದಲ್ಲಿ ಕೊರೊನಾ ಸೋಂಕು ಹರಡಿ ಜನಸಾಮಾನ್ಯರು,ಕೃಷಿ ಕೂಲಿಕಾರ್ಮಿಕರು ಸಂಕಷ್ಟದಲ್ಲಿ ಇರುವಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಸಿ, ಜನರಿಗೆ ತೊಂದರೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ಬಗ್ಗೆ ವಿರೋಧ ಪಕ್ಷಗಳು ಮಾತನಾಡುತ್ತಿಲ್ಲ. ದೇಶದಲ್ಲಿ ಹಣದುಬ್ಬರ, ರೂಪಾಯಿಮೌಲ್ಯ, ಕೈಗಾರಿಕಾ ಉತ್ಪಾದನೆ ಕಡಿಮೆ ಆಗಿದೆ.ಕೃಷಿ, ಕೂಲಿಕಾರ್ಮಿಕರಿಗೆ ಕೆಲಸ ಇಲ್ಲ. ಆದಾಯ ಇಲ್ಲದೇ, ಆದರೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಸಂಕಷ್ಟದಲ್ಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನಪರ ಯೋಜನೆಗಳನ್ನು ಜಾರಿ ಮಾಡುವಲ್ಲಿ ವಿಫಲವಾಗಿವೆ’ ಎಂದು ತಿಳಿಸಿದರು.
ತಹಶೀಲ್ದಾರ್ ಡಿ.ವಿ.ದಿವಾಕರ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.
ಪ್ರಜಾ ಸಂಘರ್ಷ ಸಮಿತಿ ಜಿಲ್ಲಾ ಸಹ ಸಂಚಾಲಕ ಚನ್ನರಾಯಪ್ಪ, ಮುಖಂಡ ಜುಬೇರ್ ಅಹಮದ್, ಕೆ.ರಾಮಾಂಜಿನಪ್ಪ, ಎಲ್.ವೆಂಕಟೇಶ್, ಟಿ.ಎಲ್.ವೆಂಕಟೇಶ್, ಜಿ.ಎಂ.ರಾಮಕೃಷ್ಣಪ್ಪ, ಆರ್.ಚಂದ್ರಶೇಖರ ರೆಡ್ಡಿ, ಎಚ್.ಎನ್.ಚಂದ್ರಶೇಖರ ರೆಡ್ಡಿ, ನಾರಾಯಣಸ್ವಾಮಿ, ಬಿ.ಕೆ.ನರಸಿಂಹಪ್ಪ, ಬೈರೆಡ್ಡಿ, ಚಲಪತಿ ಇದ್ದರು.