ಗೌರಿಬಿದನೂರು: ‘ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಗೂ ಪ್ರಜಾಪ್ರಭುತ್ವದ ಅಡಿಯಲ್ಲಿನ ಹಕ್ಕುಗಳು ಮತ್ತು ಸೌಲಭ್ಯ ಸಿಗುವಂತೆ ಮಾಡಿ ಅವರ ಬದುಕಿಗೆ ಆಸರೆಯಾಗಬೇಕಿದೆ’ ಎಂದು ಕೆ.ಎಚ್.ಪಿ. ಫೌಂಡೇಷನ್ ಅಧ್ಯಕ್ಷ ಕೆ.ಎಚ್. ಪುಟ್ಟಸ್ವಾಮಿಗೌಡ ಹೇಳಿದರು.
ತಾಲ್ಲೂಕಿನ ಮೇಲಿನ ದಿಮ್ಮಘಟ್ಟನಹಳ್ಳಿಯಲ್ಲಿ ಕರ್ನಾಟಕ ರಾಜ್ಯ ಸಿಳ್ಳೆಕ್ಯಾತ (ಅಲೆಮಾರಿ) ಜನಾಂಗಾಭಿವೃದ್ಧಿ ವೇದಿಕೆ ಉದ್ಘಾಟಿಸಿ ಅವರು ಮಾತನಾಡಿದರು.
ದಶಕಗಳ ಹಿಂದೆ ಊರಿಂದ ಊರಿಗೆ ಸಂಚರಿಸುತ್ತಾ ಕುಲಕಸುಬು ಹಾಗೂ ಕೈಚಳಕದ ಮೂಲಕ ಬದುಕು ಸಾಗಿಸುತ್ತಿದ್ದ ಈ ಜನಾಂಗವು ಭದ್ರತೆ ಹಾಗೂ ಮೀಸಲಾತಿ ಸಿಗದೆ ವಂಚಿತರಾಗಿದ್ದಾರೆ. ಅವರ ಹಿತದೃಷ್ಟಿಯಿಂದ ವೇದಿಕೆ ರಚಿಸಲಾಗಿದೆ. ಅದರಡಿಯಲ್ಲಿ ಜನಾಂಗದ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಮುಂದಾಗಬೇಕಾಗಿದೆ. ಮುಂದಿನ ದಿನಗಳಲ್ಲಿ ಫೌಂಡೇಷನ್ ವತಿಯಿಂದ ಸಾಕಷ್ಟು ನೆರವು ನೀಡಲಾಗುವುದು ಎಂದು ಹೇಳಿದರು.
ಸಿಳ್ಳೆಕ್ಯಾತ ಜನಾಂಗದ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ್ ನಾಯಕ್ ಮಾತನಾಡಿ, ಜನಾಂಗವು ರಾಜ್ಯದ ವಿವಿಧೆಡೆ ಹಂಚಿ ಹೋಗಿದೆ. ಈ ಸಮುದಾಯದ ಜನಸಂಖ್ಯೆಯೂ ಕಡಿಮೆ ಇದೆ ಎಂದರು.
ದಶಕಗಳ ಹಿಂದೆ ಜೀವನೋಪಾಯಕ್ಕಾಗಿ ಹಳ್ಳಿಗಳ ಮೂಲಕ ಸಂಚರಿಸಿ ಬದುಕು ಕಟ್ಟಿಕೊಳ್ಳುವ ಕೆಲಸ ಮಾಡಿದ್ದಾರೆ. ಕಾಲಾಂತರದಲ್ಲಿ ಬದುಕಿಗೆ ನೆಲೆ ಸಿಕ್ಕಂತಹ ಸ್ಥಳದಲ್ಲಿ ನೆಲೆಸಿ ಇಂದಿಗೂ ತಮ್ಮ ವೃತ್ತಿ ಸೇರಿದಂತೆ ಇತರೇ ಕಸುಬುಗಳನ್ನು ರೂಢಿಸಿಕೊಂಡಿದ್ದಾರೆ. ಸಂವಿಧಾನದ ಅಡಿಯಲ್ಲಿ ಸಮುದಾಯಕ್ಕೆ ಸೂಕ್ತ ಮೀಸಲಾತಿ ದೊರೆತಿಲ್ಲ. ಹಾಗಾಗಿ, ಇಂದಿಗೂ ಹೋರಾಟ ಮಾಡುತ್ತಲೇ ಬರುತ್ತಿದ್ದೇವೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ವಿ. ಮಂಜುನಾಥ್, ಮುಖಂಡರಾದ ಜಿ.ಕೆ. ಸತೀಶ್, ಕೆ.ಎಸ್. ಅನಂತರಾಜು, ಶ್ರೀನಿವಾಸಗೌಡ, ಪಿ.ವಿ. ರಾಘವೇಂದ್ರ ಹನುಮಾನ್, ಸವಿತಾ, ಲಕ್ಷ್ಮಿ ಹಾಜರಿದ್ದರು.