ಟ್ರಸ್ಟ್ನಿಂದ ಹೊಸ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಆಲೋಚಿಸಲಾಗಿದ್ದು ಯೋಜನೆ ಸಿದ್ಧವಾಗುತ್ತಿದೆ. ಆರು ತಿಂಗಳಲ್ಲಿ ಹೊಸ ಕಟ್ಟಡದ ಕೆಲಸಗಳು ಆರಂಭವಾಗುತ್ತದೆ. 2026ರ ಡಿಸೆಂಬರ್ ವೇಳೆಗೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸಬೇಕು ಎಂದುಕೊಂಡಿದ್ದೇವೆ ಎಂದು ಸರ್.ಎಂ. ವಿಶ್ವೇಶ್ವರಯ್ಯ ಅವರ ಮೊಮ್ಮಗ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಸತೀಶ್ ಮೋಕ್ಷಗೊಂಡಂ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ಮುದ್ದೇನಹಳ್ಳಿ ಮತ್ತು ನಂದಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ಸರ್.ಎಂ.ವಿಶ್ವೇಶ್ವರಯ್ಯ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ನಿಂದ ಇಂಗ್ಲಿಷ್ ಪಾಠಕ್ಕೆ ಯೋಜಿಸಲಾಗಿದೆ. ಶನಿವಾರ ಈ ತರಗತಿಗಳನ್ನು ನಡೆಸಬೇಕು ಎಂದುಕೊಂಡಿದ್ದೇವೆ ಎಂದರು. ಶೇ 80ಕ್ಕಿಂತ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವು ನೀಡುವ ಬಗ್ಗೆಯೂ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಈ ಯೋಜನೆಗೆ ಸಂಸ್ಥೆಯೊಂದು ನೆರವು ಸಹ ನೀಡುತ್ತದೆ. ಕೆಲವು ಸಂಸ್ಥೆಗಳು ನಮ್ಮ ಕಾರ್ಯಗಳಿಗೆ ಸಹಕಾರ ನೀಡಲು ಮುಂದೆ ಬರುತ್ತಿವೆ ಎಂದರು.
ಭಾರತರತ್ನ
70ರ ಸಂಭ್ರಮ ಸರ್.ಎಂ.ವಿಶ್ವೇಶ್ವರಯ್ಯ ಅವರಿಗೆ ಭಾರತರತ್ನ ದೊರೆತು 2025ಕ್ಕೆ 70 ವರ್ಷಗಳಾಗುತ್ತಿದೆ. ಅವರಿಗೆ 1955ರಲ್ಲಿ ಈ ಗೌರವ ದೊರೆತಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 1915ರಲ್ಲಿ ಬ್ರಿಟಿಷ್ ಸರ್ಕಾರದಿಂದ ನೈಟ್ ಹುಡ್ ಗೌರವಕ್ಕೆ ವಿಶ್ವೇಶ್ವರಯ್ಯ ಅವರು ಭಾಜನರಾಗಿದ್ದರು. ಈ ಗೌರವ ದೊರೆತು 110 ವರ್ಷಗಳಾಗುತ್ತಿದೆ.