ಚಿಕ್ಕಬಳ್ಳಾಪುರ: ಜಿಲ್ಲೆಯು ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 73.61 ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ 18ನೇ ಸ್ಥಾನಕ್ಕೆ ಭಾಜನವಾಗಿದೆ. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಫಲಿತಾಂಶದಲ್ಲಿ ಭಾರಿ ಕುಸಿತ ಕಂಡಿದೆ.
ಜಿಲ್ಲೆಯಲ್ಲಿ 15,792 ಅಭ್ಯರ್ಥಿಗಳು ಮೊದಲ ಬಾರಿಗೆ ಪರೀಕ್ಷೆ ಬರೆದಿದ್ದು 11,624 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಒಟ್ಟು 15,222 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 14,636 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.
ಚಿಕ್ಕಬಳ್ಳಾಪುರ ಜಿಲ್ಲೆಯು 2023ರಲ್ಲಿ ಶೇ 96.15 ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ ಐದನೇ ಸ್ಥಾನಕ್ಕೆ ಭಾಜನವಾಗಿತ್ತು. 2022ರಲ್ಲಿ ಶೇ 95.23ರಷ್ಟು ಫಲಿತಾಂಶ ಬಂದಿತ್ತು. ಆದರೆ ಈ ಬಾರಿ ಜಿಲ್ಲೆಯ ಫಲಿತಾಂಶದಲ್ಲಿ ಭಾರಿ ಕುಸಿತವಾಗಿದೆ.
ಪ್ರತಿ ವರ್ಷ ಗರಿಷ್ಠ ಅಂಕ ಪಡೆದವರಲ್ಲಿ ಜಿಲ್ಲೆಯವರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಿದ್ದರು. ಆದರೆ ಈ ಬಾರಿ ಬೆರಳೆಣಿಕೆಯ ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ.
ಬಾಗೇಪಲ್ಲಿ ಬಿಜಿಎಸ್ ಪ್ರೌಢಶಾಲೆಯ ಎಸ್.ಎನ್.ಮೋನಿಷ್ ಸಾಯಿ 625ಕ್ಕೆ 623 ಅಂಕ ಪಡೆಯುವ ಮೂಲಕ ಜಿಲ್ಲೆಯಲ್ಲಿ ಟಾಪರ್ ಎನಿಸಿದ್ದಾರೆ. ಚೇಳೂರಿನ ಪ್ರಶಾಂತಿ ಶಾಲೆಯ ಕೆ.ಎ.ಯಶ್ವಿನ್ 621, ಚಿಂತಾಮಣಿಯ ಎಸ್.ಎನ್.ಆರ್.ಅಕಾಡೆಮಿಯ ವೈ.ಎಸ್.ಕುಶಾಲ್ 620, ಬಾಗೇಪಲ್ಲಿ ಯಂಗ್ ಇಂಡಿಯಾ ಶಾಲೆಯ ಎಸ್. ಲಕ್ಷ್ಮಿಲೀಶ 620 ಮತ್ತು ಬಿಜಿಎಸ್ ಪ್ರೌಢಶಾಲೆಯ ವಾಸವಿ ಟಿ.ಎಂ 620 ಅಂಕ ಪಡೆಯುವ ಮೂಲಕ ಜಿಲ್ಲೆಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳು ಎನಿಸಿದ್ದಾರೆ.
ಈ ಹಿಂದಿನ ವರ್ಷಗಳಂತೆಯೇ ಈ ಬಾರಿಯೂ ಬಾಲಕರಿಗಿಂತ ಬಾಲಕಿಯರು ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ವಿದ್ಯಾರ್ಥಿಗಳಿಗಿಂತ ನಗರ ಪ್ರದೇಶದ ವಿದ್ಯಾರ್ಥಿಗಳ ಅಂಕಗಳಿಕೆ ಉತ್ತಮವಾಗಿದೆ.