ಚಿಂತಾಮಣಿ: ಬಡವರ ಬಂಧು ಯೋಜನೆಯಲ್ಲಿ ಬೀದಿ ಬದಿಯ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ನೀಡಬೇಕು ಎಂದು ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಅಸ್ಲಂಪಾಷಾ ಒತ್ತಾಯಿಸಿದರು.
ನಗರದಲ್ಲಿ ಮಂಗಳವಾರ ನಡೆದ ಒಕ್ಕೂಟದ ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಸಭೆ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಬಂಡವಾಳಶಾಹಿಗಳ ಮತ್ತು ಮೀಟರ್ ಬಡ್ಡಿ ಕುಳಗಳ ಹಿಡಿತದಿಂದ ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಸಣ್ಣ ಪುಟ್ಟ ವ್ಯಾಪಾರಿಗಳ ಅನುಕೂಲಕ್ಕಾಗಿ ರೂಪಿಸಿದ್ದ ಬಡವರ ಬಂಧು ಸಾಲ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಪ್ರತಿನಿತ್ಯ ವ್ಯಾಪಾರಕ್ಕಾಗಿ ಬೆಳಿಗ್ಗೆ ಸಾಲ ತೆಗೆದುಕೊಂಡು ಸಂಜೆ ಮೀಟರ್ ಬಡ್ಡಿ ಸೇರಿಸಿ ಸಾಲವನ್ನು ವಾಪಸ್ ಕೊಡಬೇಕಾಗಿದೆ. ಗಳಿಸಿದ ಹಣವನ್ನು ಬಡ್ಡಿಗಾಗಿ ನೀಡಬೇಕಾಗಿದೆ ಎಂದರು.
ಡಿಸಿಸಿ ಬ್ಯಾಂಕಿನ ನಿರ್ದೇಶಕ ಎನ್.ನಾಗಿರೆಡ್ಡಿ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳು ನಗರಸಭೆಯಲ್ಲಿ ನೋಂದಾಯಿಸಿಕೊಳ್ಳಬೇಕು. ನಂತರ ಸಾಲಕ್ಕಾಗಿ ನಗರಸಭೆಯ ಮೂಲಕವೇ ಅರ್ಜಿ ಸಲ್ಲಿಸಿದರೆ ಡಿಸಿಸಿ ಬ್ಯಾಂಕಿನಿಂದ ಸಾಲ ಕೊಡಿಸಲು ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಪೌರಾಯುಕ್ತ ಹರೀಶ್ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಸರ್ಕಾರ ರೂಪಿಸಿರುವ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುವುದು. ಬೀದಿ ಬದಿ ವ್ಯಾಪಾರಿಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿಸಿಕೊಂಡವರಿಗೆ ಮಾತ್ರ ಸಾಲದ ಸೌಲಭ್ಯ ದೊರೆಯುತ್ತದೆ ಎಂದರು.
ಪೌರಾಯುಕ್ತ ಹರೀಶ್, ಡಿಸಿಸಿ ಬ್ಯಾಂಕಿನ ನಿರ್ದೇಶಕ ಎನ್.ನಾಗಿರೆಡ್ಡಿ, ಸಬ್ಇನ್ಸ್ಪೆಕ್ಟರ್ ನಾರಾಯಣಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷೆ ಸುಜಾತ ಶಿವಣ್ಣ, ಸಂಘಟನೆಯ ಮುಖಂಡ ಇಲಿಯಾಜ್ ಪಾಷಾ, ರವಿಕುಮಾರ್, ಪುಷ್ಪಾವತಿ, ಲಕ್ಷ್ಮಣ್, ಎಂಜಿನಿಯರ್ ಪದ್ಮನಾಭರೆಡ್ಡಿ, ರಂಗನಾಥ್ ಇದ್ದರು.