ಗೌರಿಬಿದನೂರು: ತಾಲ್ಲೂಕಿನದಾರಿನಾಯಕನ ಪಾಳ್ಯ ಸಮೀಪದ ರಾಮದೇವರಬೆಟ್ಟದಲ್ಲಿರುವ ಶಾಸನವನ್ನು ಇತ್ತೀಚೆಗೆಇತಿಹಾಸಕಾರರಾದ ಕೆ.ಧನಪಾಲ್ ಹಾಗೂ ತಂಡದ ಸದಸ್ಯರು ಅಧ್ಯಯನ ನಡೆಸಿದರು.
ಪ್ರೊ. ಕೆ.ಆರ್.ನರಸಿಂಹನ್ ಮಾರ್ಗದರ್ಶನದಲ್ಲಿ ತಾಲ್ಲೂಕಿನಲ್ಲಿರುವ ಶಾಸನಗಳ ಅಧ್ಯಯನವನ್ನು ತಂಡ ಈ ಹಿಂದಿನಿಂದಲೂ ನಡೆಸುತ್ತಿದೆ.ಆರ್. ಕಿರಣ್ ಕುಮಾರ್, ವಿನುತಾ ಕಿರಣ್, ಆರ್.ಯುವರಾಜ್, ದೀಪ್ತಿ ಶ್ರೀಹರಿ, ಮೈತ್ರೇಯಿ ಕೆ.ಜಿ ಹಾಗೂ ಇರ್ಫಾನ್ ತಂಡದಲ್ಲಿ ಇದ್ದರು.
ರಾಮದೇವರ ಬೆಟ್ಟದ ಶಿವನ ದೇವಸ್ಥಾನ ಮತ್ತು ದೇವಸ್ಥಾನ ನಿರ್ಮಾಣದ ಬಗ್ಗೆ ಶಾಸನದಲ್ಲಿ ಉಲ್ಲೇಖವಿದೆ. ಶಾಸನವು ವಿಜಯನಗರ ಸಾಮ್ರಾಜ್ಯದ ಅರಸ ಇಮ್ಮಡಿ ಹರಿಹರರಾಯರ ಕಾಲಕ್ಕೆ ಸೇರಿದೆ.
ತಾಂಬೆಯ ಕಲ್ಮನೆ ನಾಗಗಡ ಪ್ರಾಂತ್ಯದಲ್ಲಿ ಸೇನಬೋವರಾದ ಬಾಚರಸರು ದೇವರ ಬೆಟ್ಟದ ಅಹೋಬಲ ನಾಯಕರೊಳಗಾದ ಸಾಲುಮೂಲೆ ಸಮಸ್ತ ಹಲರು ಎಂಬ ವ್ಯಾಪಾರಿ ಸಮೂಹದವರು ಸೇರಿ ದೇವಸ್ಥಾನ ಕಟ್ಟಬೇಕು ಎಂದು ನಿರ್ಧರಿಸಲಾಗುತ್ತದೆ. ಈ ಕಾರ್ಯಕ್ಕೆ ರಾಮದೇವರ ಪೂಜಾರಿಯಾಗಿದ್ದ ತ್ರಿಪುರಾರಿ ದೇವ ವೀರಪ್ಪ ಅವರು ತಮ್ಮ ಬಳಿಯಿದ್ದ ಹಣದಲ್ಲಿ ಶಿವಾಲಯ ಕಟ್ಟಿಸಿರುತ್ತಾರೆ. ಆ ಸಲುವಾಗಿ ಇವರನ್ನೇ ದೇವಸ್ಥಾನದ ಸ್ಥಾನಿಕರಾಗಿ ಮತ್ತು ಕರ್ತರಾಗಿ ನೇಮಿಸಿರುತ್ತಾರೆ. ಇದಕ್ಕೆ ಒಪ್ಪದವರು ವಾರಾಣಸಿಯ ಗಂಗೆಯ ತಟದಲ್ಲಿ ಹಸುವನ್ನು, ಬ್ರಾಹ್ಮಣರನ್ನು ಮತ್ತು ತಮ್ಮ ಹಿರಿಯ ಮಗನನ್ನು ಕೊಂದ ಪಾಪದಲ್ಲಿ ಹೋಗುವರು ಎನ್ನುವ ವಿಷಯ ಶಾಸನದಲ್ಲಿ ಇದೆ.
ಬೆಟ್ಟ ಹತ್ತಲು ಸ್ಥಳೀಯರಾದ ಅಶ್ವತ್ಥಪ್ಪ ತಂಡಕ್ಕೆ ನೆರವಾಗಿದ್ದಾರೆ.ಬೆಟ್ಟದ ತಪ್ಪಲಿನಲ್ಲಿ 14ನೆಯ ಶತಮಾನದ ವೀರಗಲ್ಲಿದ್ದು ಅದರ ಅಧ್ಯಯನ ತಂಡದಿಂದ ಮುಂದುವರೆದಿದೆ.