ಬಾಗೇಪಲ್ಲಿ: ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿಗಳು ಹಾಗೂ ಕೃಷಿ ಕಾಯಿದೆಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಜ.26ರಂದು ಬೆಂಗಳೂರಿನಲ್ಲಿ ನಡೆಯಲಿರುವ ರೈತರ ಬೃಹತ್ ರ್ಯಾಲಿಯಲ್ಲಿ ತಾಲ್ಲೂಕಿನ ರೈತರು ಭಾಗವಹಿಸಲಿದ್ದಾರೆ’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪ್ರೊ.ನಂಜುಂಡಸ್ವಾಮಿ ಬಣದ) ರಾಜ್ಯ ಸಮಿತಿ ಅಧ್ಯಕ್ಷ ಬಿಜಿಹಳ್ಳಿ ಬಿ.ನಾರಾಯಣಸ್ವಾಮಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೃಷಿ ಕಾಯಿದೆಗಳನ್ನು ವಿರೋಧಿಸಿ 56 ದಿನಗಳಿಂದ ನವದೆಹಲಿಯ ಹೊರಪ್ರದೇಶದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರಮೋದಿರವರು ರೈತರನ್ನು ಇದುವರೆಗೂ ಮಾತನಾಡಿಸಿಲ್ಲ.ಕೃಷಿ ಮಸೂದೆಗಳನ್ನು ವಾಪಸ್ ಪಡೆಯಬೇಕು ಎಂದು ರೈತರು ಜ 26 ರಂದು ನವದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ಬೆಂಬಲಿಸಿ, ಬೆಂಗಳೂರಿನಲ್ಲಿ ನಡೆಯುವ ರ್ಯಾಲಿಯಲ್ಲಿ ಬಾಗೇಪಲ್ಲಿಯ ರೈತರು ಭಾಗವಹಿಸಲಿದ್ದಾರೆ’ ಎಂದು ಹೇಳಿದರು.
ರೈತ ಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಕಾರ್ಯದರ್ಶಿ ಜಿ.ರಾಮಕೃಷ್ಣ(ಹೆಗಡೆ), ಮುಖಂಡರಾದ ಎಚ್.ಎಸ್.ಸುಬ್ಬಿರೆಡ್ಡಿ, ಸಿ.ಎನ್.ಅಶ್ವಥ್ಥನಾರಾಯಣಗೌಡ, ಶ್ರೀನಿವಾಸ್, ಆರ್.ಶಿವಾರೆಡ್ಡಿ, ನಾರಾಯಣಪ್ಪ, ಬೈರಾರೆಡ್ಡಿ, ನಾರಾಯಣರೆಡ್ಡಿ ಹಾಜರಿದ್ದರು.