ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೂಡ ಕೋವಿಡ್ ಅಟ್ಟಹಾಸ ಹೆಚ್ಚುತ್ತಿದ್ದು, ಗುರುವಾರ ಒಂದೇ ದಿನ 77 ಜನರಲ್ಲಿ ಕೋವಿಡ್ ಇರುವುದು ದೃಢಪಟ್ಟಿದೆ. ಚಿಂತಾಮಣಿ ತಾಲ್ಲೂಕಿನ 53 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಕೋವಿಡ್ ಉಲ್ಭಣ, ಲಾಕ್ಡೌನ್ ಕಾರಣಕ್ಕೆ ನಗರ, ಪಟ್ಟಣಗಳಿಂದ ಜನರು ಗ್ರಾಮೀಣ ಪ್ರದೇಶಗಳಿಗೆ ವಾಪಾಸ್ ಆಗುತ್ತಿರುವುದು ಕೂಡ ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಗುರುವಾರದ ಹೊತ್ತಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 577ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಗುರುವಾರ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 28, ಬಾಗೇಪಲ್ಲಿ 8, ಚಿಂತಾಮಣಿ 19, ಗೌರಿಬಿದನೂರು 17, ಗುಡಿಬಂಡೆ 2 ಮತ್ತು ಶಿಡ್ಲಘಟ್ಟ ತಾಲ್ಲೂಕಿನ 3 ಜನರಿಗೆ ಕೋವಿಡ್ ತಗುಲಿರುವುದು ವರದಿಯಾಗಿದೆ.
ಈವರೆಗೆ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 203, ಬಾಗೇಪಲ್ಲಿ 86, ಚಿಂತಾಮಣಿ 87, ಗೌರಿಬಿದನೂರು 158, ಗುಡಿಬಂಡೆ 9 ಮತ್ತು ಶಿಡ್ಲಘಟ್ಟ ತಾಲ್ಲೂಕಿನಲ್ಲಿ34 ಮಂದಿಗೆ ಕೋವಿಡ್ ಸೋಂಕು ತಗುಲಿದೆ.
ಸೋಂಕಿತರ ಪೈಕಿ ಈವರೆಗೆ 17 ಜನರು ಮೃತಪಟ್ಟಿದ್ದಾರೆ. ಚಿಕಿತ್ಸೆಯಿಂದ 294 ಸೋಂಕಿತರು ಗುಣಮುಖರಾಗಿದ್ದಾರೆ. ಸದ್ಯ ಕೋವಿಡ್ ವಾರ್ಡ್ನಲ್ಲಿ 265 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.