ಚಿಕ್ಕಮಗಳೂರು: ನಗರದ ನಾಲ್ಕು ಕಡೆ ಕಿಡಿಗೇಡಿಗಳು ಐದು ದ್ವಿಚಕ್ರ ವಾಹನಗಳಿಗೆ ಬೆಂಕಿಹಚ್ಚಿ ಸುಟ್ಟಿದ್ದಾರೆ, ಮಂಗಳವಾರ ನಸುಕಿನಲ್ಲಿ ದುಷ್ಕೃತ್ಯ ಎಸಗಿದ್ದಾರೆ.
ಪೆನ್ಷನ್ ಮೊಹಲ್ಲ, ಗಾರಿಕಾಲುವೆ, ಶಾದಿಮಹಲ್, ಅಂಬೇಡ್ಕರ್ ರಸ್ತೆಗಳಲ್ಲಿ (ಮಾರುಕಟ್ಟೆ ರಸ್ತೆ) ಕೃತ್ಯ ಎಸಗಿದ್ದಾರೆ. ಮನೆಗಳ ಮುಂದೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕುಗಳಿಗೆ ಬೆಂಕಿ ಹೆಚ್ಚಿದ್ದಾರೆ. ಬೈಕುಗಳು ಸುಟ್ಟು ಕರಕಲಾಗಿವೆ. ಎಸ್ಪಿ ಹರೀಶ್ ಪಾಂಡೆ ಸ್ಥಳ ಪರಿಶೀಲನೆ ಮಾಡಿದ್ದಾರೆ.
‘ನಸುಕಿನಲ್ಲಿ 2.30ರಿಂದ 3.30ರ ಹೊತ್ತಿನಲ್ಲಿ ಕೃತ್ಯ ನಡೆದಿದೆ. ಅನಾಹುತ ನಡೆದಿರುವ ಪ್ರದೇಶಗಳ ಆಸುಪಾಸಿನ ಸಿಸಿ ಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗಿದೆ. ಒಬ್ಬನೇ ವ್ಯಕ್ತಿ ನಾಲ್ಕೂ ಕಡೆಗಳಲ್ಲಿ ಕೃತ್ಯ ಎಸಗಿರುವುದು ಕಂಡುಬಂದಿದೆ. ಆರೋಪಿಗಾಗಿ ಶೋಧ ಕಾರ್ಯಾಚರಣೆ ನಡೆದಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ಪಾಂಡೆ ತಿಳಿಸಿದ್ದಾರೆ.
ನಗರ ಠಾಣೆ ಮತ್ತು ಬಸವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಒಟ್ಟು ನಾಲ್ಕು ಪ್ರಕರಣ ದಾಖಲಾಗಿದೆ.
ನಗರದ ಆಯಕಟ್ಟಿನ ಸ್ಥಳಗಳು, ಪ್ರಮುಖ ವೃತ್ತಗಳು, ರಸ್ತೆಗಳು, ಮಂದಿರಗಳು, ಮಸೀದಿಗಳು, ಚರ್ಚ್ಗಳು ಪ್ರಾರ್ಥನಾ ಕೇಂದ್ರಗಳ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ.