ಶನಿವಾರ ಬೆಳಿಗ್ಗೆ 6 ರಿಂದಲೇ ಕಾಡಾನೆಗಳ ಹೆಜ್ಜೆ ಜಾಡು ಹಿಡಿದು ಸಂಚಾರವನ್ನು ಪತ್ತೆ ಹಚ್ಚುವ ಪರಿಣಿತರ ತಂಡಗಳು ಮಂಡಗುಳಿಹರ, ಕುಂಡ್ರ, ಕೆಂಜಿಗೆ, ಬೆಳಗೋಡು, ಬೈರಿಗದ್ದೆ ಗ್ರಾಮಗಳ ಅರಣ್ಯ ಪ್ರದೇಶದಲ್ಲಿ ಹುಡುಕಾಟ ನಡೆಸಿದವು. ಮಧ್ಯಾಹ್ನ 12 ರ ಸುಮಾರಿಗೆ ಬೆಳಗೋಡು ಗ್ರಾಮದ ಬಳಿ ಕಾಡಾನೆ ಇರುವುದು ಪತ್ತೆಯಾಯಿತು. ಕಾರ್ಯಾಚರಣೆಗಾಗಿ ಬಂದಿರುವ ದಸರಾ ಸಾಕಾನೆಗಳನ್ನು ದೊಡ್ಡಳ್ಳ ಗ್ರಾಮದ ಶಿಬಿರದಿಂದ ಲಾರಿಗಳ ಮೂಲಕ ಬೈರಿಗದ್ದೆ ಗ್ರಾಮಕ್ಕೆ ಕೊಂಡೊಯ್ಯಲಾಯಿತು. ಕಾಡಾನೆ ಇರುವ ಸುಳಿವು ತಿಳಿದ ವೈದ್ಯರು, ಅರಣ್ಯ ಸಿಬ್ಬಂದಿ ಬೆಳಗೋಡು ಗ್ರಾಮಕ್ಕೆ ದೌಡಾಯಿಸಿದರು. ದಟ್ಟಾರಣ್ಯದ ನಡುವೆಯಿದ್ದ ಕಾಡಾನೆಗೆ ಯಶಸ್ವಿಯಾಗಿ ಅರಿವಳಿಕೆ ಚುಚ್ಚುಮದ್ದನ್ನು ಹಾಕಲಾಯಿತು. ಚುಚ್ಚುಮದ್ದನ್ನು ಹಾಕುತ್ತಿದ್ದಂತೆ ಕಾಡಾನೆಯು ಸುಮಾರು 2 ಕಿ.ಮೀ ಯಷ್ಟು ಓಡಿ ತಳವಾರ ಸಮೀಪದ ಅರಣ್ಯವನ್ನು ತಲುಪಿ ಮಲಗಿಕೊಂಡಿತು. ಕಾಡಾನೆಯನ್ನು ಹಿಂಬಾಲಿಸಿಕೊಂಡು ಬಂದ ಸಿಬ್ಬಂದಿಯು ತಕ್ಷಣವೇ ಹಗ್ಗವನ್ನು ಬಿಗಿದರು. ಕಾಡಾನೆಯು ಎಚ್ಚರಗೊಳ್ಳುವಷ್ಟರಲ್ಲಿ ಸಾಕಾನೆಗಳನ್ನು ಬೈರಿಗದ್ದೆಯಿಂದ ತಂದು ಕಾಡಾನೆಗೆ ನಾಕಾಬಂದಿಯನ್ನು ಹಾಕಿ, ಬೆಳಗೋಡು ಗ್ರಾಮಕ್ಕೆ ತಂದು ಅಲ್ಲಿಂದ ಲಾರಿಯ ಮೂಲಕ ರಾತ್ರಿ ಎರಡು ಸಾಕಾನೆಗಳ ಸುಪರ್ದಿಯಲ್ಲಿ ದುಬಾರೆ ಆನೆ ಶಿಬಿರಕ್ಕೆ ಕಳುಹಿಸಿಕೊಡಲಾಯಿತು. ಸ್ಥಳಕ್ಕೆ ಡಿಎಫ್ಒ ಕ್ರಾಂತಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದರು.