ಅಜ್ಜಂಪುರ: ಪಟ್ಟಣದಲ್ಲಿ ರೈತರು, ಮಳೆಗಾಗಿ ಪ್ರಾರ್ಥಿಸಿ ವರುಣ ದೇವರಿಗೆ 101 ಕುಂಭಾಭಿಷೇಕ ಮಾಡಿ ಅಖಂಡ ಭಜನೆ ನಡೆಸಿದರು.
ಮುಂಗಾರು ಬಿತ್ತನೆ ಬಳಿಕ ಮಳೆಯಾಗದೆ ಇರುವುದರಿಂದ ಬೆಳೆ ಕೈತಪ್ಪುವ ಆತಂಕದಲ್ಲಿರುವ ರೈತರು ದೇವರ ಮೊರೆಹೋಗಿದ್ದು, ಉತ್ತಮ ಮಳೆ ನೀಡುವಂತೆ ಪ್ರಾರ್ಥಿಸಿದರು.
ಮಳೆ ದೇವರೆಂದೇ ಖ್ಯಾತಿಪಡೆದಿರುವ ಸೊಲ್ಲಾಪುರದ ಗುರುಸಿದ್ದರಾಮೇಶ್ವರ ಸ್ವಾಮಿ, ಬೀರಲಿಂಗೇಶ್ವರ ಸ್ವಾಮಿ, ಮಡಿವಾಳ ಮಾಚಿದೇವ, ಗ್ರಾಮದೇವತೆ ಕಿರಾಳಮ್ಮ ದೇವಿ, ಚೌಡೇಶ್ವರಿ ದೇವಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಿದರು.
ಗ್ರಾಮದ ಗೌಡರ ಬಾವಿಯಲ್ಲಿ ಗಂಗಾಪೂಜೆ ನಡೆಸಿದ ಬಳಿಕ, ಕುಂಭ ಹೊತ್ತ ಮಹಿಳೆಯರು ಈಶ್ವರ ದೇವಾಲಯಕ್ಕೆ ನಡೆಮಡಿಯಲ್ಲಿ ಸಾಗಿ, ಮಲ್ಲಿಕಾರ್ಜುನ ಸ್ವಾಮಿಗೆ ಅಭಿಷೇಕ ಮಾಡಿದರು. ವೀರಗಾಸೆ, ಡೊಳ್ಳು, ಮಂಗಳವಾಧ್ಯ ತಂಡಗಳೂ ಪಾಲ್ಗೊಂಡಿದ್ದವು.
ಬೀರಲಿಂಗೇಶ್ವರ ಸ್ವಾಮಿ ಮತ್ತು ಭಜನಾ ತಂಡದವರು ಗುರುಸಿದ್ದೇಶ್ವರ ಮಠದಲ್ಲಿ 24 ಗಂಟೆಗಳ ಅಖಂಡ ಭಜನೆ ನಡೆಸಿದರು.
ಬಳಿಕ ಗುರುಸಿದ್ದೇಶ್ವರ ಮಠ ಆವರಣದಲ್ಲಿ ಅನ್ನ ದಾಸೋಹ ನಡೆಯಿತು. ದೇವಾಲಯ ಸಮಿತಿಯ ಚಂದ್ರಪ್ಪ, ತೀರ್ಥಪ್ರಸಾದ್, ಮಂಜುನಾಥ್ ಇದ್ದರು.
ಅಜ್ಜಂಪುರದಲ್ಲಿ ಮಳೆಗಾಗಿ ಪ್ರಾರ್ಥಿಸಿ ನಡೆದ ಕುಂಭಾಭಿಷೇಕದಲ್ಲಿ ಮಹಿಳೆಯರು ಕುಂಭ ಹೊತ್ತು ಸಾಗಿದರು