2022ರ ಮೊದಲ ತ್ರೈಮಾಸಿಕದಲ್ಲಿ 28 ಕೌಟುಂಬಿಕ ಹಿಂಸೆ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 21 ಇತ್ಯರ್ಥವಾಗಿಲ್ಲ. ಸಂರಕ್ಷಣಾಧಿಕಾರಿ ಹಂತದಲ್ಲಿಯೇ 14 ಪ್ರಕರಣಗಳು ಬಾಕಿ ಉಳಿದಿವೆ. ಪ್ರಕರಣಗಳು ದಾಖಲಾದ 90 ದಿನಗಳ ಅವಧಿಯಲ್ಲಿ ಇತ್ಯರ್ಥಗೊಳಿಸಬೇಕು ಎಂದು ಜಿಲ್ಲಾಧಿಕಾರಿ ರಮೇಶ್ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಾಲ್ಲೂಕುಮಟ್ಟದ ಅಧಿಕಾರಿಗಳು ಅಂಗನವಾಡಿಗಳಿಗೆ, ಇಲಾಖೆ ಅನುದಾನ ಪಡೆಯುತ್ತಿರುವ ಸಂಸ್ಥೆಗಳಿಗೆ ನಿರಂತರವಾಗಿ ಭೇಟಿ ನೀಡಿ ಪರಿಶೀಲನೆ ಮಾಡಬೇಕು ಎಂದು ಅವರು ಸೂಚನೆ ನೀಡಿದರು.
ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ, 2022ರ ಮೊದಲ ತ್ರೈಮಾಸಿಕದಲ್ಲಿ 1369ಫಲಾನುಭವಿಗಳಿಗೆ ₹1.34 ಕೋಟಿ ಸಹಾಯಧನ ನೇರವಾಗಿ ಖಾತೆಗೆ ಪಾವತಿಸಲಾಗಿದೆ. ಯೋಜನೆಯಲ್ಲಿ ಗುರಿ ಮೀರಿ ಸಾಧನೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಸ್ತೂರಿ ಬಾ ಸದನ ಸ್ವಯಂ ಸೇವಾ ಸಂಸ್ಥೆಯು ಸ್ವಾಧಾರ ಗೃಹವನ್ನು ನಿರ್ವಹಿಸುತ್ತಿದೆ. ಈ ಗೃಹಕ್ಕೆ ನೀಡುವ ಅನುದಾನ ವಿಳಂಬವಾಗಿದೆ. ಅನುದಾನ ಸಕಾಲದಲ್ಲಿ ಬಿಡುಗಡೆಗೊಳಿಸಬೇಕು ಎಂದು ಜಿಲ್ಲಾಧಿಕಾರಿಗೆ ಕಸ್ತೂರಿಬಾ ಸದನದ ಕಾರ್ಯದರ್ಶಿ ಮೋಹಿನಿ ಸಿದ್ದೇಗೌಡ ಮನವಿ ಮಾಡಿದರು.