ಚಿಕ್ಕಮಗಳೂರು: ಜಿಲ್ಲೆಯ ಬೀರೂರಿನ 23 ವರ್ಷದ ಸೋಂಕಿತ ಗರ್ಭಿಣಿಗೆ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಹೆರಿಗೆ ಮಾಡಿಸಲಾಗಿದೆ.
ಸೋಂಕಿತ ಗರ್ಭಿಣಿಯನ್ನು ಬುಧವಾರ ಕೋವಿಡ್ ಆಸ್ಪತ್ರೆಗೆ ಕರೆತರಲಾಗಿತ್ತು. ಹೆರಿಗೆ ನೋವು ಎಂದು ಮಹಿಳೆ ಹೇಳಿದ್ದಾರೆ. ವೈದ್ಯರು, ಸಿಬ್ಬಂದಿ ಹೆರಿಗೆ ಮಾಡಿಸಿದ್ದಾರೆ.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿ.ಮೋಹನಕುಮಾರ್ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಗರ್ಭಿಣಿಗೆ ಹೆರಿಗೆ ನೋವು ಇತ್ತು. ಸಿಸೇರಿಯನ್ ಮಾಡಿ ಹರಿಗೆ ಮಾಡಿಸಲಾಯಿತು. ಹೆಣ್ಣು ಶಿಶು ಜನಿಸಿದೆ. ತಾಯಿ ಮತ್ತು ಶಿಶು ಇಬ್ಬರು ಕ್ಷೇಮವಾಗಿದ್ದಾರೆ’ ಎಂದು ತಿಳಿಸಿದರು.
‘ಡಾ.ಆರತಿ, ಡಾ.ಎಚ್.ಜಿ.ನಾಗರಾಜ್, ಸ್ಟಾಫ್ ನರ್ಸ್ ರಿಯಾ, ‘ಡಿ’ ಗ್ರೂಪ್ ನೌಕರ ನಾಗರಾಜ ಅವರು ಹೆರಿಗೆ ಮಾಡಿಸಿದ ತಂಡದಲ್ಲಿದ್ದರು. ಈ ತಂಡ ಶ್ಲಾಘನೀಯ ಕಾರ್ಯನಿರ್ವಹಿಸಿದೆ’ ಎಂದರು.
ಮಾತೃ ವಿಯೋಗ: ಸೋಂಕಿತ ಮಹಿಳೆಯ ತಾಯಿ ಕೋವಿಡ್ನಿಂದಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಗುರುವಾರ ಮೃತಪಟ್ಟಿದ್ದಾರೆ.