ಕಾಫಿ, ಅಡಿಕೆ, ಕಾಳುಮೆಣಸು, ತೆಂಗು ಬೆಳೆಗಾರರ ಸಂಕಷ್ಟ ಪರಿಹಾರಕ್ಕೆ ಕ್ರಮ

ಚಿಕ್ಕಮಗಳೂರು: ಕಾಫಿ, ಅಡಿಕೆ, ಕಾಳುಮೆಣಸು, ತೆಂಗು ಬೆಳೆಗಾರರ ಸಂಕಷ್ಟ ಪರಹರಿಸಲು ಕ್ರಮ ವಹಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಶುಕ್ರವಾರ ಆನ್ಲೈನ್ ಸಂವಾದದಲ್ಲಿ ಬೆಳೆಗಾರರ ಸಂಕಷ್ಟ ಆಲಿಸಿ ಮಾತನಾಡಿದರು. ಮೂರು ವರ್ಷ ತೀವ್ರ ಬರಗಾಲ, ಎರಡು ವರ್ಷ ಅತಿವೃಷ್ಟಿಯಿಂದಾಗಿ ಕಾಫಿ, ಅಡಿಕೆ, ತೆಂಗು, ಕಾಳುಮೆಣಸು ಎದುರಿಸುತ್ತಿರುವ ಕಷ್ಟಗಳನ್ನು ಬೆಳೆಗಾರರು, ಜನಪ್ರತಿನಿಧಿಗಳು ವಿವರವಾಗಿ ತಿಳಿಸಿದ್ದಾರೆ. ಸಂಬಂಧಪಟ್ಟ ಸಚಿವರು, ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರಕ್ಕೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಸಾಲ ಮರು ಹೊಂದಾಣಿಕೆ, ಬಡ್ಡಿ ಮನ್ನಾ ಮನವಿಗಳ ಬಗ್ಗೆ ಗಮನ ಹರಿಸಲಾಗುವುದು. ಕಾಫಿ ಬೆಳೆಗಾರರು ಆದಾಯ ತೆರಿಗೆ ಸೆಕ್ಷನ್ 7ಬಿ(1) ನಿಂದ ವಿನಾಯಿತಿ ಕೋರಿದ್ದು, ಈ ಬಗ್ಗೆಯೂ ಪರಿಶೀಲನೆ ಮಾಡಲಾಗುವುದು. ಮನವಿಗಳನ್ನು ಪರಿಶೀಲಿಸಿ ನೆರವು ನೀಡುವ ನೀಡಲು ಗಮನ ಹರಿಸಲಾಗುವುದು ಎಂದರು.
ತೆಂಗು ಬೆಳೆಗಾರರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೃಷಿ ಮತ್ತು ತೋಟಗಾರಿಕೆ ಸಚಿವರ ಗಮನ ಸೆಳೆಯಲಾಗುವುದು. ತೆಂಗು ಪುನಶ್ಚೇತನ ಹಾಗೂ ನಿಗದಿತ ಬೆಂಬಲ ಬೆಲೆಗೂ ಕ್ರಮ ವಹಿಸಲಾಗುವುದು ಎಂದರು.
ಬೆಳಗಾರರ ಮನವಿಗಳ ಪಟ್ಟಿಯನ್ನು ಇ–ಮೇಲ್ ಮೂಲಕ ಕಳಿಸುವಂತೆಯೂ ಸಚಿವೆ ನಿರ್ಮಲಾ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ, ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್. ಭೋಜೇಗೌಡ, ಬೆಂಗಳೂರಿನಿಂದ ಸಂಸದೆ ಶೋಭಾ ಕರಂದ್ಲಾಜೆ, ಇತರರು ಬೆಳೆಗಾರರ ಸಂಕಷ್ಟಗಳನ್ನು ಸಚಿವರಿಗೆ ತಿಳಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಪೂವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕುಮಾರ, ಬೆಳೆಗಾರರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.