ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು | 2.13 ಲಕ್ಷ ಕುಟುಂಬಕ್ಕೆ ಧನಭಾಗ್ಯ

Published 12 ಜುಲೈ 2023, 0:30 IST
Last Updated 12 ಜುಲೈ 2023, 0:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಅನ್ನಭಾಗ್ಯದ 5 ಕೆ.ಜಿ ಅಕ್ಕಿ ಬದಲಿಗೆ ಧನಭಾಗ್ಯಕ್ಕೆ ಜಿಲ್ಲೆಯಲ್ಲಿ 2.13 ಲಕ್ಷ ಕುಟುಂಬಗಳ ಯಜಮಾನಿಯ ಖಾತೆಗೆ ನೇರ ನಗದು ವರ್ಗಾವಣೆ(ಡಿಬಿಟಿ) ಆಗುತ್ತಿದ್ದು, ಆಧಾರ್ ಸಂಖ್ಯೆ ಜೋಡಣೆಯಾಗದ 25 ಸಾವಿರ ಕುಟುಂಬಗಳು ಈ ಯೋಜನೆಯ ಲಾಭವನ್ನು ಮೊದಲ ಕಂತಿನಲ್ಲಿ ಪಡೆಯುತ್ತಿಲ್ಲ.

ಜಿಲ್ಲೆಯಲ್ಲಿ ಒಟ್ಟು 2,65,743 ಕುಟುಂಬಗಳು ಬಿಪಿಎಲ್ ಪಡಿತರ ಚೀಟಿ ಹೊಂದಿದ್ದು, ಇವುಗಳ ಪೈಕಿ 2,13,257 ಕುಟುಂಬಗಳಿಗೆ ಧನಭಾಗ್ಯ ದೊರಕಲಿದೆ. ಬಾಕಿ 25,682 ಕುಟುಂಬಗಳ ಬ್ಯಾಂಕ್ ಖಾತೆಯ ವಿವರ ದೊರೆತಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಬಿ.ಎಂ.ಸುಬ್ರಹ್ಮಣ್ಯ ತಿಳಿಸಿದರು.

ಈ ತಿಂಗಳು ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗೆ ಬಂದಾಗ ಅವರಿಂದ ಆಧಾರ್ ವಿವರ ಪಡೆದು ಮುಂದಿನ ದಿನಗಳಲ್ಲಿ ಅವರ ಬ್ಯಾಂಕ್ ಖಾತೆಗೂ ಹಣ ಸಂದಾಯ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಮೊದಲ ತಿಂಗಳ ಹಣ ಪಾವತಿಗೆ ಸರ್ಕಾರದಿಂದ ₹1.31 ಕೋಟಿ ಬಿಡುಗಡೆಯಾಗಿದೆ. ‌ಕುಟುಂಬದ ಯಜಮಾನಿಯ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ. ಯಜಮಾನಿ ಇಲ್ಲದಿದ್ದರೆ ಕುಟುಂಬದ ಹಿರಿಯ ಪುರುಷನ ಖಾತೆಗೆ ಹಣ ಸಂದಾಯವಾಗಲಿದೆ ಎಂದು ಹೇಳಿದರು.

ಮೂರು ತಿಂಗಳಿಂದ ಪಡಿತರ ಪಡೆದುಕೊಳ್ಳದ ಕುಟುಂಬಗಳು ಈ ಧನಭಾಗ್ಯದಿಂದ ಹೊರಗುಳಿಯಲಿವೆ. ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕುಟುಂಬದಲ್ಲಿ ಮೂರು ಅಥವಾ ಅದಕ್ಕಿಂತ ಕಡಿಮೆ ಜನರಿದ್ದರೆ ಅವರಿಗೂ ಧನಭ್ಯಾಗ್ಯ ದೊರಕುವುದಿಲ್ಲ. ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕುಟುಂಬಕ್ಕೆ ಈಗಾಗಲೇ 35 ಕೆ.ಜಿ ಅಕ್ಕಿ ವಿತರಿಸಲಾಗುತ್ತಿದೆ. ಕುಟುಂಬದಲ್ಲಿ ನಾಲ್ಕು ಜನರಿದ್ದರೆ ತಲಾ 10 ಕೆ.ಜಿಯಂತೆ 40 ಕೆ.ಜಿ ಅಕ್ಕಿ ನೀಡಬೇಕಾಗಿತ್ತು. ಆ ಕುಟುಂಬಕ್ಕೆ ಬಾಕಿ 5 ಕೆ.ಜಿಯ ಹಣ ₹170 ಪಾವತಿಸಲಾಗುತ್ತದೆ ಎಂದು ಹೇಳಿದರು.‌

22,342 ಅಂತ್ಯೋದಯ ಪಡಿತರ ಕಾರ್ಡುದಾರದಲ್ಲಿ ಮೂರಕ್ಕಿಂತ ಕಡಿಮೆ ಜನರಿರುವ 7,482 ಕುಟುಂಬಗಳಿವೆ. ಈ ಕುಟುಂಬಗಳು ಧನಭಾಗ್ಯದಿಂದ ಹೊರಗಳಿಯಲಿವೆ ಎಂದು ಸುದ್ದಿಗಾರರಿಗೆ ವಿವರಿಸಿದರು.

43 ನ್ಯಾಯಬೆಲೆ ಅಂಗಡಿಗೆ ನೋಟಿಸ್

ಜಿಲ್ಲೆಯಲ್ಲಿ 530 ನ್ಯಾಯಬೆಲೆ ಅಂಗಡಿಗಳಿದ್ದು ಕಡಿಮೆ ಅಕ್ಕಿ ನೀಡುವುದು ಮತ್ತು ಪಡಿತರದಾರರಿಂದ ಹಣ ಕೇಳುವ ಬಗ್ಗೆ ದೂರುಗಳು ಬಂದ 43 ನ್ಯಾಯಬೆಲೆ ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ಸುಬ್ರಹ್ಮಣ್ಯ ತಿಳಿಸಿದರು. ಎರಡು ಅಂಗಡಿಗಳ ಪರವಾನಗಿ ಅಮಾನತು ಮಾಡಲಾಗಿದ್ದು ಬಾಕಿ 41 ಅಂಗಡಿಗಳ ಮೇಲಿನ ದೂರುಗಳು ಪರಿಶೀಲನೆ ಹಂತದಲ್ಲಿವೆ ಎಂದು ವಿವರಿಸಿದರು.

ಪಡಿತರ ಕಾರ್ಡುಗಳ ವಿವರ

ತಾಲ್ಲೂಕು; ಅಂತ್ಯೋದಯ; ಬಿಪಿಎಲ್‌; ಒಟ್ಟು

ಚಿಕ್ಕಮಗಳೂರು; 4224; 67332; 71556

ಕಡೂರು; 5435; 67437; 72872

ಕೊಪ್ಪ; 2488; 13696; 16184

ಮೂಡಿಗೆರೆ; 2686; 25106; 27792

ಎನ್.ಆರ್.ಪುರ; 2166; 12548; 14714

ಶೃಂಗೇರಿ; 849; 6423; 7272

ತರೀಕೆರೆ; 2377; 33403; 35780

ಅಜ್ಜಂಪುರ; 2117; 17456; 19573

ಒಟ್ಟು; 22342; 243401; 265743

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT