ಚಿಕ್ಕಮಗಳೂರು: ನಗರದ 20ನೇ ವಾರ್ಡ್ನ ಶಾಂತಿನಗರ, ಬಂಡಿಮೋಟು ಬಡಾವಣೆಗಳು ಚರಂಡಿಗಳು ಅವ್ಯವಸ್ಥೆಯ ಕೂಪಗಳಾಗಿವೆ. ಶಾಂತಿನಗರದಲ್ಲಿ ಮನೆಯೊಂದರ ಮುಂದೆಯೇ ರಾಡಿ ನೀರು ಜಮಾಯಿಸಿದೆ.
ಬಟ್ಟೆ, ಪಾತ್ರೆ ತೊಳೆದ ನೀರು, ಬಚ್ಚಲು ನೀರು ಹರಿಯಲು ಚರಂಡಿ ವ್ಯವಸ್ಥೆ ಇಲ್ಲ. ಗಲೀಜು ನೀರು ಮನೆಗಳ ಮುಂದೆಯೇ ಜಮಾಯಿಸಿದೆ. ಗಲೀಜು, ದುರ್ನಾತ, ಸೊಳ್ಳೆ ಕಾಟದ ನಡುವೆ ಕುಟುಂಬಗಳು ಬದುಕುವಂತಾಗಿದೆ.
ಶಾಂತಿನಗರ ಮತ್ತು ಬಂಡಿಮೋಟ ಬಡಾವಣೆ ಗಲ್ಲಿಗಲ್ಲಿಯಲ್ಲೂ ಚರಂಡಿ ದುಃಸ್ಥಿತಿಯಲ್ಲಿವೆ. ನಗರ ಪೊಲೀಸ್ ಸ್ಟೇಷನ್ ಹಿಂಭಾಗದ ಕೆಲವೆಡೆ ಚರಂಡಿಗಳು ಕಟ್ಟಿಕೊಂಡಿವೆ. ಮೂಗುಮೂಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ಇದೆ. ಕೆಲವೆಡೆ ಕಲ್ಲು, ಮಣ್ಣು ತುಂಬಿದ್ದು, ಚರಂಡಿಗಳು ‘ಕಣ್ಮರೆ’ಯಾಗಿವೆ.
ಕಸದ ರಾಶಿ: ಶಾಂತಿನಗರದ ಕೆಲವು ಗಲ್ಲಿಗಳು ವಾಹನ ಓಡಾಡದಷ್ಟು ಕಿರಿದಾಗಿವೆ. ಕಸದ ಸಂಗ್ರಹಕ್ಕೆ ಸ್ವಚ್ಛತಾ ವಾಹಿನಿಗಳು ಈ ಗಲ್ಲಿಗಳಿಗೆ ಹೋಗಲ್ಲ. ಗಲ್ಲಿಯ ತುದಿ ಅಥವಾ ನಿವೇಶನಗಳಲ್ಲಿ ಕಸ ಸುರಿಯವ ಪರಿಪಾಟ ಇದೆ.
ನಗರ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಕಸ ರಾಶಿ ಬಿದ್ದಿದೆ. ಕಸದ ಸಮಸ್ಯೆ ವಿಪರೀತವಾಗಿದೆ. ಕಸದ ಗಾಡಿ ಶುಲ್ಕವನ್ನು ಪ್ರತಿ ತಿಂಗಳು ವಸೂಲಿ ಮಾಡುತ್ತಾರೆ ಎಂದು ನಿವಾಸಿಗಳು ದೂರುತ್ತಾರೆ.
ಕೆಲವು ವಿದ್ಯುತ್ ಕಂಬಗಳಲ್ಲಿ ತಂತಿಗಳು ಅಪಾಯಕ್ಕೆ ಆಹ್ವಾನ ನೀಡುವಂತಿವೆ. ತುದಿ ಭಾಗ ವೈರಗಳು, ಫ್ಯೂಸ್ಗಳ ಮಯವಾಗಿವೆ. ಕಂಬಗಳು ಶಿಥಿಲಾವಸ್ಥೆಯಲ್ಲಿವೆ.