ಕೊಪ್ಪ: ‘ಶಿಕ್ಷಣ ಲಾಭದಾಯಕ ಕ್ಷೇತ್ರವಾಗದೆ ಸೇವಾ ಕ್ಷೇತ್ರವಾಗಬೇಕು. ಆ ಮೂಲಕ ಎಲ್ಲರಿಗೂ ಶಿಕ್ಷಣ ತಲುಪುವಂತಾಗಬೇಕು’ ಎಂದು ನಿವೃತ್ತ ಶಿಕ್ಷಕ ವೆಂಕಟೇಶಯ್ಯ ಹೇಳಿದರು.
ತಾಲ್ಲೂಕಿನ ಭಂಡಿಗಡಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1981-83 ಸಾಲಿನಲ್ಲಿ 7ನೇ ತರಗತಿ ವ್ಯಾಸಂಗ ಮಾಡಿದ್ದ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಬಳಗದಿಂದ ಶನಿವಾರ ಆಯೋಜಿಸಿದ್ದ ಶಿಕ್ಷಕರಿಗೆ ಗುರು ನಮನ ಕಾರ್ಯಕ್ರಮದಲ್ಲಿ ಅವರು ಗೌರವ ಸ್ವೀಕರಿಸಿ ಮಾತನಾಡಿದರು.
‘ಗುರು ಶಿಷ್ಯರ ಬಾಂಧವ್ಯ ಸಡಿಲಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ 40 ವರ್ಷದ ಹಿಂದೆ ಶಿಕ್ಷಣ ಪಡೆದ ನಮ್ಮ ಶಿಷ್ಯ ಬಳಗ ಗುರುನಮನ ಸಲ್ಲಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ. ಈ ಶಾಲೆಯಲ್ಲಿ ಕಲಿತ ಮಕ್ಕಳು ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಉತ್ತಮ ಹೆಸರು ಮಾಡಿದ್ದಾರೆ. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕು. ಅಲ್ಲಿ ಮಕ್ಕಳು ಶಿಕ್ಷಣದ ಜೊತೆ ಜೀವನ ಪಾಠವನ್ನೂ ಕಲಿಯುತ್ತಾರೆ’ ಎಂದು ಅವರು ಹೇಳಿದರು.